ಬೆಂಗಳೂರು: ನೋಟು ನಿಷೇಧದ ನಂತರ ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ಮಾಡುವುದರಲ್ಲಿ ಶೇಕಡಾ 18ರಷ್ಟು ಕುಸಿತ ಕಂಡುಬಂದಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.
ನೋಟುಗಳ ನಿಷೇಧದ ನಂತರ ಪ್ರಯಾಣಿಕರು ಟಿಕೆಟ್ ರದ್ದು ಮಾಡಿರುವುದರಿಂದ ಸಂಸ್ಥೆಗೆ 15 ಕೋಟಿ ರೂಪಾಯಿ ನಷ್ಟವಾಗಿದೆ. ನೋಟು ನಿಷೇಧದ ನಂತರ ಅನೇಕ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದೂಡಿದ್ದಾರೆ.'' ಎಂದು ಅವರು ಹೇಳಿದರು.
ಪ್ರಯಾಣಿಕರಿಗೆ ನಗದು ರಹಿತ ಪ್ರಯಾಣ ಸೌಲಭ್ಯವನ್ನು ನೀಡಲು ಕೆಎಸ್ಆರ್ ಟಿಸಿ ಮೂರು ಹೊಸ ವಿಧಾನಗಳಾದ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ, ಇ-ವ್ಯಾಲೆಟ್ ಮತ್ತು ಪಾಯಿಂಟ್ ಆಫ್ ಸೇಲ್ ಮೆಶಿನ್ ಗಳನ್ನು ಅಳವಡಿಸಲಿದೆ ಎಂದರು.
ಕೆಎಸ್ಆರ್ ಟಿಸಿಯ ಉದ್ದೇಶಿತ ಎಲೆಕ್ಟ್ರಾನಿಕ್ ಮೆಶಿನ್ ನಲ್ಲಿ ಪ್ರಯಾಣಿಕರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡುಗಳನ್ನು ಬಳಸಬಹುದು. ಸುಮಾರು 2,000 ಬಸ್ಸುಗಳಲ್ಲಿ ಇದು ಉಪಯೋಗವಾಗುತ್ತದೆ.
ಇನ್ನು ಕೆಎಸ್ಆರ್ ಟಿಸಿ ಖಾಸಗಿ ಸಂಸ್ಥೆ ಜೊತೆ ಇ-ವ್ಯಾಲೆಟ್ ನ್ನು ಅಳವಡಿಸುವ ಯೋಜನೆ ಹೊಂದಿದೆ. ಇಲ್ಲಿ ಪ್ರಯಾಣಿಕರು ಅಡ್ವಾನ್ಸ್ ಪೇಮೆಂಟ್ ಮಾಡಬಹುದು. ಗ್ರಾಹಕರ ಮೊಬೈಲ್ ನಂಬರ್ ಮೂಲಕ ಹಣ ಪಾವತಿಸಬಹುದು. ರಾಜ್ಯಾದ್ಯಂತ 10 ಟಿಕೆಟ್ ಕೌಂಟರ್ ಗಳಲ್ಲಿ ಪಾಯಿಂಟ್ ಆಫ್ ಸೇಲ್ ಸೌಲಭ್ಯವನ್ನು ಕೂಡ ತರುವ ಯೋಜನೆಯಲ್ಲಿ ಕೆಎಸ್ಆರ್ ಟಿಸಿ ಇದೆ ಎಂದು ಕಟಾರಿಯಾ ತಿಳಿಸಿದ್ದಾರೆ.