ರಾಜ್ಯ

ನನ್ನ ಅನುಭವವೇ 'ಭಾಗ್ಯ ಯೋಜನೆ'ಗಳ ಜಾರಿಗೆ ಕಾರಣ: ಸಿದ್ದರಾಮಯ್ಯ

Manjula VN

ಬೆಂಗಳೂರು: ಬಡತನ ಹಾಗೂ ನನ್ನ ಜೀವನದ ಅನುಭವಗಳೇ 'ಭಾಗ್ಯ ಯೋಜನೆ'ಗಳನ್ನು ಜಾರಿಗೆ ತರಲು ಕಾರಣ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.

ನಗರದಲ್ಲಿ ನಡೆದ ಮುಖ್ಯಮಂತ್ರಿಗಳೊಂದಿಗೆ ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಸರ್ಕಾರ ಜಾರಿಗೆ ತಂದಿರುವ ಸಾಕಷ್ಟು ಯೋಜನೆಗಳು ದನಿ ಎತ್ತದ ಜನರಿಗೆ ಉಪಯೋಗವಾಗಿದೆ. ಜಾರಿಗೆ ತಂದಿರುವ ಯೋಜನೆ ಜನಕ್ಕೆ ಸರಿಯಾದ ರೀತಿಯಲ್ಲಿ ತಲುಪುತ್ತಿದೆಯೋ, ಇಲ್ಲವೋ ಎಂಬುದರ ಬಗ್ಗೆ ನಮಗೆ ತಿಳಿಯುತ್ತಿಲ್ಲ. ಯೋಜನೆಗಳ ಬಗ್ಗೆ ಉತ್ತಮ ಪ್ರಚಾರ ನೀಡುವುದರಲ್ಲಿ ನಾವು ವಿಫಲರಾಗಿದ್ದೇವೆ. ಹೀಗಾಗಿಯೇ ನಾವು ಹಿಂದೆ ಉಳಿದಿದ್ದೇವೆಂದು ಹೇಳಿದ್ದಾರೆ.

ಮುಂದಿನ ಎರಡು ವರ್ಷಗಳಲ್ಲಿ ಜಾರಿಗೆ ತಂದಿರುವ ಯೋಜನೆಗಳ ಕುರಿತು ಸೂಕ್ತ ಪ್ರಚಾರ ನೀಡಲು ನಿರ್ಧರಿಸಿದ್ದೇವೆ. ಈ ಮಾಹಿತಿಯು ಇಲಾಖೆ ಹಾಗೂ ನನ್ನ ಮನಸ್ಸಿನಲ್ಲಿ ಮಾತ್ರವಿತ್ತು ಎಂದು ತಿಳಿಸಿದ್ದಾರೆ.

ಇದೇ ವೇಳೆ ಅಭಿವೃದ್ಧಿ ವಿಚಾರಗಳ ಕುರಿತ ಪ್ರಶ್ನೆಗಳಿಗೆ ಉತ್ತರ ನೀಡಲು ತಿರಸ್ಕರಿಸುವ ಅವರು, ಅಭಿವೃದ್ಧಿ ಬಗ್ಗೆ ಕುರಿತು ಮಾತನಾಡಲು ಮತ್ತು ವಿಮರ್ಶೆ ಮಾಡಲು ಸರ್ಕಾರ ಸಿದ್ಧವಿದೆ ಎಂದಿದ್ದಾರೆ.

ಇದೇ ವೇಳೆ, ಚಾಮರಾಜನಗರ ಕುರಿತು ಪ್ರತ್ರಕರ್ತರೊಬ್ಬರು ಮುಖ್ಯಮಂತ್ರಿ ಜಿಲ್ಲೆಗಳ ಭೇಟಿ ಅಪಶಕುನಗಳನ್ನು ದೂರಮಾಡಿದ್ದು, ಸಿದ್ದರಾಮಯ್ಯ ಅವರಿಗೆ ಉತ್ತಮ ಪ್ರಚಾರವನ್ನು ತಂದುಕೊಟ್ಟಿದೆ. ಆದರೆ, ಜಿಲ್ಲೆಗಳಿಗೆ ಮಾತ್ರ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಚಿಂತನೆಗಳನ್ನು ನಡೆಸಲಾಗಿದೆ. ಒಂದೊಂದು ಜಿಲ್ಲೆ ಅಭಿವೃದ್ಧಿ ಕಾರ್ಯಗಳಿಗೂ ರು. 50 ಕೋಟಿ ಹಣವನ್ನು ಮೀಸಲಿಡಲಾಗಿದೆ ಎಂದು ಹೇಳಿದರು.

ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ  ಸ್ಥಳೀಯ, ಆಂಗ್ಲ ಮಾಧ್ಯಮಗಳು ಸೇರಿದಂತೆ 300ಕ್ಕೂ ಹೆಚ್ಚು ಪತ್ರಕರ್ತರು ಆಗಮಿಸಿದ್ದರು. ಮುಖ್ಯಮಂತ್ರಿಗಳೊಂದಿಗೆ ಚರ್ಚೆಯಿದ್ದ ಕಾರಣ ಸಾಕಷ್ಟು ಸಿದ್ಧತೆಗಳೊಂದಿಗೆ ಮಾಧ್ಯಮವರ್ಗದವರು ಹಾಜರಿದ್ದರು. ಜಿಲ್ಲೆಗಳ ಕುರಿತಂತೆ ಪ್ರಶ್ನೆ ಎತ್ತಿದ ಕೂಡಲೇ ಸಿದ್ದರಾಮಮಯ್ಯ ಅವರು ಹೇಳಿಕೆ ನೀಡುವುದನ್ನು ನಿಲ್ಲಿಸಿಬಿಟ್ಟರು. ಬೆಂಗಳೂರು ಮತ್ತು ಮೈಸೂರಿನ ಪತ್ರಕರ್ತರು ಸತತವಾಗಿ ಪ್ರಶ್ನೆ ಕೇಳುತ್ತಲೇ ಇದ್ದ ಕಾರಣ ಕಾರ್ಯಕ್ರಮ ಆಯೋಜಕರು ಹಾಗೂ ಕೆಲ ಪತ್ರಕರ್ತರ ನಡುವೆ ವಾಗ್ವಾದಗಳು ಆರಂಭವಾಗಿದ್ದವು. ಇದರಿಂತ ಕೆಲ ಗಂಟೆಗಳ ಕಾಲ ಸ್ಥಳದಲ್ಲಿ ಗೊಂದಲ ವಾತಾವರಣ ಸೃಷ್ಟಿಯಾಗಿದ್ದವು.

ನಂತರ ಮತ್ತೆ ಮಾತುಕತೆ ಆರಂಭವಾಗುತ್ತಿದ್ದಂತೆ ಪತ್ರಕರ್ತರು ಅಭಿವೃದ್ಧಿ ವಿಚಾರಗಳನ್ನು ಬಿಟ್ಟು, ಸರ್ಕಾರದ ಯೋಜನೆಗಳು ಹಾಗೂ ಪತ್ರಕರ್ತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಆರಂಭಿಸಿದರು. ಪತ್ರಕರ್ತರ ಸಮಸ್ಯೆಗಳನ್ನು ಆಲಿಸಿದ ಅವರು, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ಸಮಯವಿಲ್ಲದೇ ಇದ್ದರೂ, ಮತ್ತೆ ಚರ್ಚೆ ಮುಂದುವರೆಸಿದ್ದ ಸಿದ್ದರಾಮಯ್ಯ ಅವರು, ತಾಳ್ಮೆಯಿಂದ ಒಂದೊಂದು ಪ್ರಶ್ನೆಗೂ ಉತ್ತರ ನೀಡಿದ್ದರು.

SCROLL FOR NEXT