ರಾಜ್ಯ

ಜಲಮಂಡಳಿ ನಿರ್ಲಕ್ಷ್ಯಕ್ಕೆ ಶಿಕ್ಷಕಿ ಬಲಿ

Manjula VN

ಬೆಂಗಳೂರು: ಒಳಚರಂಡಿ ಮಾರ್ಗದ ಕಾಮಗಾರಿ ನಡೆಸಲು ಜಲಂಡಳಿಯಿಂದ ತೋಡಿದ್ದ ಗುಂಡಿಯನ್ನು ಸರಿಯಾಗಿ ಮುಚ್ಚದ ಕಾರಣ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಿಕ್ಷಕಿಯೊಬ್ಬರು ಬಲಿಯಾಗಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಜಾಲಿ ಅಬ್ರಹಾಂ (45) ಸಾವನ್ನಪ್ಪಿದ ಶಿಕ್ಷಕಿ. ಜಾಲಿ ಅಬ್ರಹಾಂ ಅವರು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ 8 ಗಂಟೆ ಸುಮಾರಿಗೆ ಪತಿ ಅಬ್ರಹಾಂ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಶಾಲೆಗೆ ಹೋಗುವಾಗ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿದ್ದ ಗುಂಡಿಗೆ ಬೈಕ್ ಬಿದ್ದಿದೆ. ಈ ವೇಳೆ ನೆಲಕ್ಕುರುಳಿದ ಜಾಲಿ ಅವರಿಗೆ ತೀವ್ರವಾಗಿ ಪೆಟ್ಟಾಗಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಜಲಮಂಡಳಿಯು ಭಾನುವಾರ ರಾತ್ರಿ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಒಳಚರಂಡಿ ಮಾರ್ಗದ ಕಾಮಗಾರಿ ನಡೆಸಿತ್ತು. ಕಾಮಗಾರಿ ನಂತರ ಗುಂಡಿಯನ್ನು ಮಣ್ಣಿನಿಂದ ಮುಚ್ಚಲಾಗಿದೆ. ಬೆಳಿಗ್ಗೆ ಇದೇ ಮಾರ್ಗದಲ್ಲಿ ಅಬ್ರಹಾಂ ಅವರು ತಮ್ಮ ಬೈಕ್ ನಲ್ಲಿ ಬಂದಿದ್ದಾರೆ. ಈ ವೇಳೆ ಮುಚ್ಚಿದ್ದ ಗುಂಡಿ ಮೇಲೆ ಬೈಕ್ ಚಕ್ರ ಹರಿದಿದೆ. ಇದರಂತೆ ಮಣ್ಣು ಕುಸಿದು ಬಿದ್ದಿದೆ. ಬೈಕ್ ನ ಮುಂದಿನ ಚಕ್ರ ಗುಂಡಿಯಲ್ಲಿ ಹೂತುಕೊಂಡ ಪರಿಣಾಮ ಬೈಕ್ ಕೆಳಗೆ ಬಿದ್ದಿದೆ. ಈ ವೇಳೆ ನೆಲಕ್ಕೆ ಬಿದ್ದ ಜಾಲಿ ಅಬ್ರಹಾಂ ಅವರ ತಲೆಗೆ ತೀವ್ರವಾಗಿ ಪೆಟ್ಟಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಜಾಲಿ ಅಬ್ರಹಾಂ ಅವರ ತಲೆಯಿಂದ ತೀವ್ರವಾಗಿ ರಕ್ತಸ್ರಾವವಾಗಿದೆ. ಕೂಡಲೇ ಸಮೀಪದಲ್ಲಿದ್ದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದ ಮಧ್ಯೆಯೇ ಜಾಲಿ ಅವರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಇನ್ನು ಅಬ್ರಹಾಂ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಘಟನೆ ವೇಳೆ ಜಾಲಿ ಅವರು ಹೆಲ್ಮೆಟ್ ಧರಿಸಿರಲಿಲ್ಲದಿರುವುದು ತಿಳಿದುಬಂದಿದ್ದು, ಇದೀಗ ಜಾಲಿ ಅವರ ಪತಿ ಅಬ್ರಹಾಂ ವಿರುದ್ಧ ಐಪಿಸಿ ಸೆಕ್ಷನ್ 279 (ಸಾರ್ವಜನಿಕ ಪ್ರದೇಶದಲ್ಲಿ ನಿರ್ಲಕ್ಷ್ಯ ಚಾಲನೆ) ಮತ್ತು 304ಎ (ನಿರ್ಲಕ್ಷ್ಯಕ್ಕೆ ಜೀವ ಬಲಿ)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ, ಘಟನೆಗೆ ಕಾರಣರಾದ ಜಲಮಂಡಳಿ ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧವೂ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನು ಮಂಗಳವಾರ ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

SCROLL FOR NEXT