ರಾಜ್ಯ

ಚಲಿಸುವ ಕಾರಿನಲ್ಲಿ ಚಾಲಕನಿಗೆ ಹೃದಯ ಸ್ತಂಭನ: 2 ವಾಹನಗಳು ಜಖಂ

Manjula VN

ಬೆಂಗಳೂರು: ಕಾರು ಚಾಲನೆ ಮಾಡುತ್ತಿದ್ದ ವೇಳೆ ಚಾಲಕನಿಗೆ ಹೃದಯ ಸ್ತಂಭನ ಸಂಭವಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡಿದ್ದ ಕಾರೊಂದು ಅಪಘಾತಕ್ಕೀಡಾಗಿ 2 ವಾಹನಗಳನ್ನು ಜಖಂ ಮಾಡಿರುವ ಘಟನೆ ಜೆ.ಪಿ. ನಗರ 2ನೇ ಹಂತದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಸುಧೀಂದ್ರ (32) ಹೃದಯ ಸ್ತಂಭನಕ್ಕೀಡಾದ ಕಾರು ಚಾಲಕ. ಮೈಸೂರು ಮೂಲದ ನಂಜನಗೂಡಿನ ನಿವಾಸಿಯಾಗಿರುವ ಇವರು ಕೆಲವು ವರ್ಷಗಳ ಹಿಂದಷ್ಟೇ ನಗರಕ್ಕೆ ಬಂದು ಕೋರಮಂಗಲದ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.

ಖಾಸಗಿ ಕಾರೊಂದರ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸುಧೀಂದ್ರ ಅವರು ನಿನ್ನೆ ಬೆಳಿಗ್ಗೆ 7.30ರ ಸುಮಾರಿಗೆ ಲಾಲ್ ಬಾಗ್ ನಲ್ಲಿ ಪ್ರಯಾಣಿಕರೊಬ್ಬನ್ನು ಕರೆದುಕೊಂಡು ಬರಲು ಹೋಗಿದ್ದರು. ಈ ವೇಳೆ ತಿರುಪತಿ ತಿರುಮಲ ದೇಗುಲದ ಬಳಿ ಬರುತ್ತಿದ್ದಂತೆ ಸುಧೀಂದ್ರ ಅವರಿಗೆ ಹೃದಯಾ ಸ್ತಂಭನವಾಗಿದೆ.

ನಂತರ ನಿಯಂತ್ರಣ ಕಳೆದುಕೊಂಡ ಕಾರು ಮುಂದೆ ನಿಂತಿದ್ದ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದೆ. ಮತ್ತೆ ವಿರುದ್ಧ ದಿಕ್ಕಿನಲ್ಲಿ ಹೋದ ಕಾರು ಮತ್ತೊಂದು ಹಾಗೂ ಗೂಡ್ಸ್ ಗಾಡಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಸುಧೀಂದ್ರ ಅವರು ಪ್ರಜ್ಞೆ ತಪ್ಪಿ ಕಾರಿನ ಸೀಟ್ ಮೇಲೆ ಬಿದ್ದಿರುವುದನ್ನು ಸ್ಥಳೀಯರು ನೋಡಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೃದಯಾಘಾತ ಸಂಭವಿಸಿದ್ದರಿಂದ ಸುಧೀಂದ್ರ ಅವರು ಸಾವನ್ನಪ್ಪಿದ್ದಾರೆಂದು ವೈದ್ಯರು ಹೇಳಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗತೊಡಗಿದೆ. ಇದರಂತೆ ಸ್ಥಳಕ್ಕಾಗಮಿಸಿದ್ದ ಜಯನಗರ ಟ್ರಾಫಿಕ್ ಪೊಲೀಸರು ಕೆಲಸ ಗಂಟೆಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆಯನ್ನು ನಿವಾರಿಸದರು.

SCROLL FOR NEXT