ರಾಜ್ಯ

40 ವರ್ಷದ ಬಳಿಕ ಮತ್ತೆ ಅದ್ಧೂರಿ ಮದುವೆಗೆ ಸಿದ್ಧಗೊಂಡ ಮೈಸೂರು ಅರಮನೆ

Manjula VN

ಮೈಸೂರು; 40 ವರ್ಷಗಳ ಬಳಿಕ ಮತ್ತೆ ಅರಮನೆಯಲ್ಲಿ ಮದುವೆ ಸಡಗರ ಆರಂಭಗೊಂಡಿದ್ದು, ರಾಜವಂಶಸ್ಥ ಯದುವೀರ ಶ್ರೀ ಕೃಷ್ಣದತ್ತ ಚಾಮರಾಜ ಒಡೆಯರ್ ಮದುವೆಗೆ ಸಿದ್ಧತೆಗಳು ಪೂರ್ಣಗೊಂಡಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತು ಪ್ರಮೋದಾದೇವಿ ದತ್ತು ಪುತ್ರ ಯದುವೀರ್ ಅವರು ರಾಜಸ್ತಾನದ ಡುಂಗುರಪುರದ ಹರ್ಷವರ್ಧನ್ ಸಿಂಗ್ ಮತ್ತು ಮಹೇಶ್ರೀ ಕುಮಾರಿ ಪುತ್ರಿ ತ್ರಿಷಿಕಾ ಕುಮಾರಿ ಅವರನ್ನು ವರಿಸಲಿದ್ದು, ವಿಶ್ವವಿಖ್ಯಾತ ಅರಮನೆಯಲ್ಲಿ ಶನಿವಾರದಿಂದ ಬುಧವಾರದವರೆಗೆ ವೈವಾಹಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರವೇರಲಿದೆ.

ಈಗಾಗಲೇ ಅರಮನೆಯ ಮುಂಭಾಗದಲ್ಲಿ ವೇದಿಕೆ ಸಿದ್ಧಗೊಂಡಿದ್ದು, ಚಪ್ಪರ ನಿರ್ಮಿಸಿ, ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಅರಮನೆಯ ದರ್ಬಾರ್ ಸಭಾಂಗಣಗಳಲ್ಲಿ ಆಸನ, ಮಂಟಪಗಳನ್ನು ಸಜ್ಜುಗೊಳಿಸಲಾಗಿದೆ. ಕಲ್ಯಾಣ ಮಂಟಪದಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಕಡಿಮೆ ಸಂಖ್ಯೆಯಲ್ಲಿ ಆಸನ ವ್ಯವಸ್ಥೆಯನ್ನು ಮಾಡಲಾಗಿದ್ದು, ವಿಐಪಿಗಳು ಹಾಗೂ ಹತ್ತಿರದ ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ದರ್ಬಾರ್ ಸಂಭಾಂಗಣ ಮತ್ತು ಅರಮನೆ ಅಂಗಳದಲ್ಲಿ ಸುಮಾರು 2,500 ಆಸನ ವ್ಯವಸ್ಥೆ ಮಾಡಲಾಗಿದ್ದು, ವಿವಾಹ ಕಾರ್ಯಕ್ರಮ ವೀಕ್ಷಣೆಗೆ 5 ಕಡೆ ಬೃಹತ್ ಎಲ್ ಇಡಿ ಪರದೆಗಳನ್ನು ಅಳವಡಿಸಲಾಗಿದೆ.

ಇಂದು ಸಂಜೆ 4 ಗಂಟೆಯಿಂದಲೇ ವರನಿಗೆ ಎಣ್ಣೆ ಸ್ನಾನದೊಂದಿಗೆ ಮದುವೆಯ ಶಾಸ್ತ್ರೋಕ್ತ ಕಾರ್ಯಕ್ರಮಗಳು ಆರಂಭವಾಗಲಿದೆ. ಬುಧವಾರದಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. 27ರಂದು ಬೆಳಿಗ್ಗೆ 9.5 ರಿಂದ 9.35ರವರೆಗೆ ಮುಹೂರ್ತ ನೆರವೇರಲಿದೆ. ರಾಜ್ಯದಲ್ಲಿ ಮುಂಗಾರು ಮಳೆ ವಾತಾವರಣವಿದ್ದು, ಮಳೆ ಬರುವ ಹಿನ್ನೆಲೆಯಲ್ಲಿ ಅರಮನೆಯ ಸುತ್ತಲೂ ವಾಟರ್ ಪ್ರೂಫ್ ಪೆಂಡಾಲ್ ಗಳನ್ನು ಹಾಕಲಾಗಿದೆ.

ಮದುವೆ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮೈಸೂರು ಜಿಲ್ಲೆ ಸಚಿವ ಹೆಚ್.ಸಿ. ಮಹದೇವಪ್ಪ, ಸಚಿವ ಜಿ. ಪರಮೇಶ್ವರ, ಕೆ.ಜೆ.ಜಾರ್ಜ್, ಮಾಜಿ ಸಚಿವ ಎಂ.ಹೆಚ್. ಅಂಬರೀಷ್ ಮತ್ತು ವಿ. ಶ್ರೀನಿವಾಸ ಪ್ರಸಾದ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಹಾಜರಾಗಲಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.

ಮದುವೆ ಸಮಾರಂಭ ಕುರಿತಂತೆ ಮಾತನಾಡಿರುವ ಯದುವೀರ ಅವರ ತಾಯಿ ಪ್ರಮೋದಾ ದೇವಿ ಒಡೆಯರ್ ಅವರು, ವಿವಾಹ ನೆರವೇರಿಸಲು ನಡೆಸಲಾಗುವ ಕಾರ್ಯಕ್ರಮಗಳಿಗೆ ರಾಜ್ಯ ಪೊಲೀಸರ ಸಹಕಾರ ಹಾಗೂ ಅನುಮತಿಯನ್ನು ಪಡೆಯಲಾಗಿದೆ. ಇದಲ್ಲದೆ, ಅರಮನೆಯ ಒಳಗಡೆ ನಡೆಯುವ ಕಾರ್ಯಕ್ರಮಗಳನ್ನು ಜನರಿಗೆ ತೋರಿಸುವ ಸಲುವಾಗಿ ಅರಮನೆಯ ಹೊರಾಂಗಣದಲ್ಲಿ ದೊಡ್ಡ ಪರದೆಗಳನ್ನು ಹಾಕಲಾಗಿದೆ. ಸರ್ಕಾರ ಕೂಡ ಎಲ್ಲಾ ರೀತಿಯ ಸಹಕಾರ ನೀಡಲು ಮುಂದಾಗಿದೆ ಎಂದು ಹೇಳಿದ್ದಾರೆ.

SCROLL FOR NEXT