ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೈಜೀರಿಯನ್ ಪ್ರಜೆಗಳ ಪುಂಡಾಟಿಕೆ ಮುಂದುವರಿದಿದ್ದು, ಕಂಠಪೂರ್ತಿ ಕುಡಿದಿದ್ದ ನೈಜೀರಿಯಾ ಮಹಿಳೆಯೊಬ್ಬಳು ಮೆಜೆಸ್ಟಿಕ್ನಲ್ಲಿ ಸಾರ್ವಜನಿಕರನ್ನು ಕಚ್ಚಲು ಯತ್ನಿಸಿದ ಘಟನೆ ಸೋಮವಾರ ನಡೆದಿದೆ.
ನ್ಯಾಷನಲ್ ಮಾರ್ಕೆಟ್ ನಲ್ಲಿ ಮೊಬೈಲ್ ಖರೀದಿಸುವ ವೇಳೆ ಅಂಗಡಿ ಮಾಲೀಕನ ಜೊತೆಯೂ ಜಗಳಕ್ಕಿಳಿದು ಗಲಾಟೆ ನಡೆಸಿದ್ದರು. ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಉಪ್ಪಾರಪೇಟೆ ಪೊಲೀಸ್ ಠಾಣೆ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಮೇಲೂ ಹಲ್ಲೆ ನಡೆಸಲು ಮಹಿಳೆ ಮುಂದಾಗಿದ್ದಳು. ಬಳಿಕ ಆಕೆಯನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆತಂದಾಗ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದಾಳೆ.
ಆಸ್ಪತ್ರೆಯಲ್ಲೂ ಜನರ ಮೇಲೆ ಹಲ್ಲೆ ನಡೆಸಲು ನೈಜೀರಿಯನ್ ಮಹಿಳೆ ಮುಂದಾಗಿದ್ದಳು. ಆಕೆಯ ರಂಪಾಟ ಕಂಡು ಸಾರ್ವಜನಿಕರು ದಂಗಾಗಿ ಹೋಗಿದ್ದರು. ಜನರು ದಿಕ್ಕಾಪಾಲಾಗಿ ಓಡಿಹೋಗಿದ್ದರು. ಬಟ್ಟೆಯನ್ನೆಲ್ಲಾ ಹರಿದುಕೊಂಡು ರಸ್ತೆಯಲ್ಲೇ ಉರುಳಾಡಿದ್ದಳು. ಹಾರಾಟ, ಚೀರಾಟ ನಡೆಸಿದ್ದ ನೈಜೀರಿಯನ್ ಮಹಿಳೆಯ ಮೇಲೆ ಬಲೆಯಂತಹ ಬಟ್ಟೆಯನ್ನು ಎಸೆದು ಸೆರೆ ಹಿಡಿಯಲಾಗಿದೆ.
ಇತ್ತೀಚೆಗೆ ವಿಲ್ಸನ್ ಗಾರ್ಡನ್ ಬಳಿ ಬಿಎಂಟಿಸಿ ಕಂಡಕ್ಟರ್ ಮೇಲೆ ನಾಲ್ವರು ನೈಜಿರಿಯನ್ ಮಹಿಳೆಯರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿತ್ತು. ಅಲ್ಲದೇ ಕಂಠಪೂರ್ತಿ ಕುಡಿದಿದ್ದ ಆಫ್ರಿಕನ್ ವಿದ್ಯಾರ್ಥಿ ಹೆಣ್ಣೂರು ರಸ್ತೆಯಲ್ಲಿ ಪಾದಚಾರಿಗಳಿಗೆ ಬೈಕ್ನಿಂದ ಡಿಕ್ಕಿ ಹೊಡೆದು ಗಲಾಟೆ ಮಾಡಿಕೊಂಡ ಘಟನೆ ರಾಷ್ಟ್ರಮಟ್ಟದ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಗಿತ್ತು.