ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ(ಜಎಸ್ ಟಿ) ಮಸೂದೆಯನ್ನು ವಿರೋಧಿಸಿ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಜೆಎಸಿಯ ಪದಾಧಿಕಾರಿಗಳು ನಿನ್ನೆ ಗಾಂಧಿನಗರದಲ್ಲಿರುವ ಕೇಂದ್ರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು.
ಜಿಎಸ್ ಟಿ ಮಂಡಳಿಯ ರಾಜ್ಯ ವಿರೋಧಿ ಮತ್ತು ಫೆಡರಲ್ ವಿರೋಧಿ ನಿರ್ಧಾರಗಳು ರಾಜ್ಯಗಳ ಆರ್ಥಿಕ ಸ್ವಾಯತ್ತತೆಯನ್ನು ನಾಶಪಡಿಸುತ್ತದೆ ಎಂದು ಅಧಿಕಾರಿಗಳು ಆರೋಪಿಸಿದರು.
ದೇಶದ ಪ್ರಮುಖ ಸುಧಾರಣಾ ತೆರಿಗೆ ವಿಧಾನ ಎಂದು ಹೇಳಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆ ಮಸೂದೆ ಕೇಂದ್ರ ಸರ್ಕಾರಕ್ಕೆ ವರವಾದರೆ, ರಾಜ್ಯ ಸರ್ಕಾರಗಳಿಗೆ ಶಾಪವಾಗಿದೆ. ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ತನ್ನ ವ್ಯಾಪಾರ ಮೂಲವನ್ನು ಕಳೆದುಕೊಳ್ಳಲಿದ್ದು ಶೇಕಡಾ 50ಕ್ಕಿಂತ ಹೆಚ್ಚು ಉದ್ಯೋಗಗಳನ್ನು ಕಳೆದುಕೊಳ್ಳಲಿದೆ ಎಂದು ಕರ್ನಾಟಕ ವಾಣಿಜ್ಯ ತೆರಿಗೆ ಸೇವೆಗಳ (ಅಧಿಕಾರಿಗಳು) ಅಸೋಸಿಯೇಷನ್ ನ ಉಪಾಧ್ಯಕ್ಷ ಫಣಿರಾಜ್ ಡಿ.ವಿ ತಿಳಿಸಿದ್ದಾರೆ.
ಅಖಿಲ ಭಾರತ ವಾಣಿಜ್ಯ ತೆರಿಗೆ ಒಕ್ಕೂಟ ಕರೆ ನೀಡಿರುವ ಪ್ರತಿಭಟನೆಯ ಭಾಗ ಇದಾಗಿದೆ.