ಬೆಂಗಳೂರು: ಉಪಶಮನಕಾರಕ ಆರೈಕೆಯ(Palliative care) ಪಿತಾಮಹ ಎಂದು ಗುರುತಿಸಿಕೊಂಡಿರುವ ರಾಬರ್ಟ್ ಟ್ವೈಕ್ರಾಸ್ ಅವರು ನಾಳೆ ಬೆಂಗಳೂರಿನ ಕಿದ್ವಾಯಿ ಮೆಮೊರಿಯಲ್ ಆಂಕಾಲಜಿ ಸಂಸ್ಥೆಯಲ್ಲಿ ಕರ್ನಾಟಕ ಉಪಶಮನಕಾರಕ ಆರೈಕೆ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಮೊದಲ ಹಂತದಲ್ಲಿ ಯೋಜನೆಯು ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ರಾಯಚೂರು ಮತ್ತು ಕಾರವಾರಗಳಲ್ಲಿ ಜಾರಿಗೆ ಬರಲಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರು ಮತ್ತು ನರ್ಸ್ ಗಳಿಗೆ ತರಬೇತಿ ನೀಡಲಾಗುತ್ತದೆ.
ಮನುಷ್ಯನಿಗೆ ಬರುವ ಮಾರಕ ಅನಾರೋಗ್ಯಗಳಿಗೆ ಚಿಕಿತ್ಸೆ ನೀಡುವುದಕ್ಕೆ ಉಪಶಮನಕಾರಕ ಆರೈಕೆ ವಿಧಾನಗಳಿರುತ್ತವೆ. ಈ ಯೋಜನೆಯನ್ನು ಅಳವಡಿಸಿಕೊಳ್ಳುತ್ತಿರುವ ಮೂರನೇ ರಾಜ್ಯ ಕರ್ನಾಟಕವಾಗಿದೆ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಈಗಾಗಲೇ ಜಾರಿಗೆ ಬಂದಿದೆ.
ರಾಬರ್ಟ್ ಟ್ವೈಕ್ರಾಸ್ ಬ್ರಿಟನ್ ನ ಶಾರೀರಿಕ ತಜ್ಞ ಮತ್ತು ಬರಹಗಾರ. 1970ರ ದಶಕದಲ್ಲಿ ವಿಶ್ರಾಂತಿ ಚಳವಳಿಯಲ್ಲಿ ಮುಂಚೂಣಿ ಪಾತ್ರವನ್ನು ಅವರು ವಹಿಸಿದ್ದರು. ಆಧುನಿಕ ವೈದ್ಯಕೀಯ ಚಿಕಿತ್ಸೆ ವಿಧಾನದಲ್ಲಿ ಉಪಶಮನಕಾರಕ ಆರೈಕೆಯ ಗುರುತಿಸುವಿಕೆಯಲ್ಲಿ ಅವರ ಶ್ರಮವಿದೆ.
ಉಪಶಮನಕಾರಕ ಆರೈಕೆಯ ವಿಶೇಷ ಕೋರ್ಸ್ ಅಮೆರಿಕಾದಲ್ಲಿದೆ. ಭಾರತದಲ್ಲಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ಸಂಸ್ಥೆ ಮತ್ತು ಮುಂಬೈಯ ಟಾಟಾ ಮೆಮೋರಿಯಲ್ ನಲ್ಲಿ ಮಾತ್ರ ಈ ಕುರಿತ ಕೋರ್ಸ್ ಇದೆ. ಕಿದ್ವಾಯಿ ಮುಂದಿನ ವರ್ಷದಿಂದ ಜಾರಿಗೆ ತರಲು ನಿಶ್ಚಯಿಸಿದೆ. ಕಿದ್ವಾಯಿಯಲ್ಲಿ ಈ ಚಿಕಿತ್ಸೆ ನೀಡುವ ಮೂವರು ವೈದ್ಯರ ತಂಡವಿದ್ದು 20 ಬೆಡ್ ಗಳಿವೆ. ನಗರದ ಕರುಣಾಶ್ರಯ, ಕಿದ್ವಾಯಿ ಮತ್ತು ಸೈಂಟ್ ಜಾನ್ಸ್ ಹಾಸ್ಪಿಟಲ್ ನಲ್ಲಿ 20 ಸಿಬ್ಬಂದಿಗಳಿದ್ದು ಅವರು ಉಪಶಮನಕಾರಿ ಆರೈಕೆಯ ತರಬೇತುದಾರರಾಗಿದ್ದಾರೆ. ಹೆಚ್ ಸಿಜಿ, ನಾರಾಯಣ ಹೃದಯಾಲಯ, ವೈದೇಹಿ ಆಸ್ಪತ್ರೆಗಳಲ್ಲಿ ಪ್ಯಾಲಿಯೇಟಿವ್ ಕೇರ್ ವೃತ್ತಿಪರರಿದ್ದಾರೆ. ಆದರೆ ಅವರೆಲ್ಲಾ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ. ಈ ಚಿಕಿತ್ಸೆ ನಗರಗಳಲ್ಲಿ ಮಾತ್ರವಲ್ಲದೆ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸಿಗುವಂತಾಗಬೇಕು ಎನ್ನುತ್ತಾರೆ ಕಿದ್ವಾಯಿ ನಿರ್ದೇಶಕ ಡಾ.ಕೆ.ಬಿ.ಲಿಂಗೇ ಗೌಡ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos