ರಾಜ್ಯ

ಅರಣ್ಯಾಧಿಕಾರಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿರುವ ನಾಗರಹೊಳೆ ರೆಸಾರ್ಟ್ ಯೋಜನೆ

Sumana Upadhyaya
ಬೆಂಗಳೂರು: ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯದ ಒಳಗೆ ಗೇಟ್ ವೇ ರೆಸಾರ್ಟ್ ಯೋಜನೆಯನ್ನು ರದ್ದುಪಡಿಸಲು ತಾಜ್ ಗ್ರೂಪ್ ಆಫ್ ಹೊಟೇಲ್ಸ್ ಗೆ 23.88 ಕೋಟಿ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ನೀಡಿಯಾಗಿದ್ದರೂ ಸಹ ಈ ಅಕ್ರಮ ವ್ಯವಹಾರಕ್ಕೆ ಯಾವ ಅರಣ್ಯಾಧಿಕಾರಿಗಳು ಕಾರಣರು ಎಂಬುದನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ.
ಭಾರೀ ಮೊತ್ತದ ದಂಡ ಕಟ್ಟಲು ಹೇಳಿದ್ದು ರಾಜ್ಯ ಅರಣ್ಯ ಇಲಾಖೆಗೆ ಹಿನ್ನಡೆಯಾಗಿದೆ. ಅರಣ್ಯ ಮತ್ತು ವನ್ಯಮೃಗಗಳ ಕಾನೂನಿನ ತಪ್ಪು ಗ್ರಹಿಕೆ ಮತ್ತು ವನ್ಯಮೃಗ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದರಿಂದ ಇದು ನಡೆದಿದೆ ಎನ್ನಲಾಗುತ್ತಿದೆ. ನಾಗರಹೊಳೆ ಅಭಯಾರಣ್ಯದೊಳಗೆ ತ್ರಿಸ್ಟಾರ್ ರೆಸಾರ್ಟ್ ಕಟ್ಟಲು ಅನುಮತಿ ನೀಡಲಾಗಿತ್ತು. ಇದಕ್ಕೆ 1997ರಲ್ಲಿ ತಡೆ ತಂದ ಹೈಕೋರ್ಟ್ ಇದೊಂದು ಅಕ್ರಮ ವ್ಯವಹಾರ ಎಂದು ಹೇಳಿತ್ತು. ಅಲ್ಲದೆ ಕೇಂದ್ರ ಸರ್ಕಾರ 1998ರಲ್ಲಿ ರೆಸಾರ್ಟ್ ನಿರ್ಮಿಸುವ ಯೋಜನೆಯನ್ನು ತಿರಸ್ಕರಿಸಿತ್ತು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್, ಅರಣ್ಯ ಮತ್ತು ವನ್ಯಮೃಗ ಕಾನೂನನ್ನು ಉಲ್ಲಂಘಿಸಿ ಅಭಯಾರಣ್ಯದೊಳಗೆ ರೆಸಾರ್ಟ್ ನಿರ್ಮಿಸಲು ಯಾರು ಅವಕಾಶ ಮಾಡಿಕೊಟ್ಟರು ಎಂಬುದನ್ನು ಪತ್ತೆಹಚ್ಚಬೇಕಾಗಿದೆ. ಆ ಕೆಲಸವನ್ನು ಆದಷ್ಟು ಶೀಘ್ರವೇ ಮಾಡುತ್ತೇವೆ ಎಂದು ಹೇಳಿದರು.
20 ವರ್ಷಗಳ ವ್ಯಾಜ್ಯ: ಈ ಅಕ್ರಮ ರೆಸಾರ್ಟ್ ನಿರ್ಮಾಣದ ಬಗ್ಗೆ ಮೊದಲಿಗೆ ಮಡಿಕೇರಿ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ನಂತರ ಹೈಕೋರ್ಟ್ ಗೆ ಹೋಗಿ, ಸುಪ್ರೀಂ ಕೋರ್ಟ್ ಗೂ ಹೋಯಿತು. 2002ರಲ್ಲಿ ರೆಸಾರ್ಟ್ ಯೋಜನೆಯನ್ನು ರದ್ದುಗೊಳಿಸಿದಾಗ ತಾವು ಈಗಾಗಲೇ ಕಟ್ಟಡದ ಫೌಂಡೇಶನ್, ಸ್ಥಳದ ಬಾಡಿಗೆ ಇತ್ಯಾದಿಗಳಿಗೆ 3 ಕೋಟಿ ರೂಪಾಯಿ ಖರ್ಚು ಮಾಡಿದ್ದು ಪರಿಹಾರ ನೀಡಬೇಕೆಂದು ಕೋರ್ಟ್ ನಲ್ಲಿ ಕೇಸು ಹಾಕಿತ್ತು.
ಜೂನ್ 29, 2002ರಲ್ಲಿ ನ್ಯಾಯಾಲಯ ತಾಜ್ ಗ್ರೂಪ್ ಗೆ 10 ಕೋಟಿ ರೂಪಾಯಿ ಮತ್ತು ಶೇಕಡಾ 10ರಷ್ಟು ಬಡ್ಡಿ ಮೊತ್ತವನ್ನು ನೀಡಬೇಕೆಂದು ಸರ್ಕಾರಕ್ಕೆ ಆದೇಶ ನೀಡಿತ್ತು. ಆದರೆ ಪರಿಹಾರ ಮೊತ್ತ ಜಾಸ್ತಿಯಾಯಿತು ಎಂದು ಅರಣ್ಯ ಇಲಾಖೆ ಅರ್ಜಿ ಸಲ್ಲಿಸಿತ್ತು. ಇದರಿಂದಾಗಿ ಮತ್ತೆ 4 ವರ್ಷ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯಿತು.
SCROLL FOR NEXT