ರಾಜ್ಯ

ಬೆಳೆ ನಾಶದ ಭೀತಿಯಲ್ಲಿ ಕಾವೇರಿ ತೀರದ ರೈತರು

Sumana Upadhyaya
ಬೆಂಗಳೂರು: ಕೃಷ್ಣರಾಜ ಸಾಗರ ಅಣೆಕಟ್ಟಿನ ಗೇಟಿಗೆ ಕಟ್ಟಿರುವ ಚೈನುಗಳು ಗಾಳಿಗೆ ನೇತಾಡುತ್ತಿವೆ. ಖಾಲಿಯಾದ ನದಿಯ ಪಕ್ಕದಲ್ಲಿ ಕುಳಿತು ಇಬ್ಬರು ಭದ್ರತಾ ಸಿಬ್ಬಂದಿ ಮಾತನಾಡುತ್ತಿರುವುದು ಕೇಳುತ್ತಿದೆ. '' ನನ್ನ 30 ವರ್ಷಗಳ ಸೇವೆಯಲ್ಲಿ ಕಾವೇರಿ ನದಿ ನೀರು ಇಷ್ಟು ಬತ್ತಿ ಹೋದದ್ದನ್ನು ನಾನೆಂದಿಗೂ ನೋಡಿರಲಿಲ್ಲ'' ಎಂದು ಒಬ್ಬ ಭದ್ರತಾ ಸಿಬ್ಬಂದಿ ಹೇಳಿದರೆ ಮತ್ತೊಬ್ಬ ಲಕ್ಷ್ಮೀ ದೇವಿ ನಮ್ಮಿಂದ ದೂರ ಹೋಗಿದ್ದಾರೆ ಎಂದು ಹೇಳುತ್ತಾರೆ.
ಕಾವೇರಿ ಮತ್ತು ಅದರ ಉಪ ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಾ ಹೋಗುತ್ತಿದ್ದು, ಇದನ್ನೇ ನಂಬಿಕೊಂಡಿರುವ ರೈತರು, ಗ್ರಾಮಸ್ಥರು ಮತ್ತು ನಗರಗಳ ನಿವಾಸಿಗಳ ಗತಿಯೇನು? ಮೈಸೂರು, ಮಂಡ್ಯ, ಕೊಡಗು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಜನತೆ ಇದೇ ನೀರನ್ನು ನಂಬಿಕೊಂಡಿದ್ದಾರೆ. ಆದರೆ ಈ ವರ್ಷ ಕುಡಿಯುವ ನೀರು ಮತ್ತು ನೀರಾವರಿಗೆ ತತ್ವರವಾಗಿರುವ ಸನ್ನಿವೇಶ ಎದುರಾಗಿದೆ. ಕುಡಿಯುವ ನೀರು ಪೂರೈಕೆಗೆ ಸಂಬಂಧಪಟ್ಟಂತೆ ಮುಂದಿನ ಜೂನ್ ತಿಂಗಳವರೆಗೆ ಕುಡಿಯುವ ನೀರು ಪೂರೈಕೆ ಮಾಡುವಷ್ಟು ನೀರು ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಆದರೆ ಸಮಸ್ಯೆ ಇರುವುದು ನೀರಾವರಿಗೆ ಸಂಬಂಧಪಟ್ಟಂತೆ. ಕಾವೇರಿ ಜಲಾನಯನ ಪ್ರದೇಶದಲ್ಲಿರುವ ರೈತರು ತಮ್ಮ ಬೆಳೆ ನಾಶ ಹೊಂದುತ್ತಿರುವುದನ್ನು ನೋಡುತ್ತಿದ್ದಾರೆ. ಹೇಮಾವತಿ ಜಲಾಶಯ ಭಾಗಗಳಲ್ಲಿ ಕೃಷಿಗೆ ಲಭ್ಯವಿರುವ ಒಟ್ಟು 72 ಸಾವಿರದ 360 ಎಕರೆ ಭೂಮಿಯಲ್ಲಿ 17 ಸಾವಿರದ 151.70 ಎಕರೆಗಳಲ್ಲಿ ಮಾತ್ರ ಬೆಳೆ ಬೆಳೆದು ನಿಂತಿದೆ. ಸರ್ಕಾರ ಇವರಿಗೆ ಬೆಳೆ ನಾಶಕ್ಕೆ ಪರಿಹಾರ ನೀಡುವುದಿಲ್ಲ. ಇವರೆಲ್ಲಾ ತಮಗೆ ಸಿಗುವ ನೀರನ್ನು ಕುಡಿಯಲು, ನೀರಾವರಿಗೆ ಬಳಸುತ್ತಿದ್ದಾರೆ. 
ನೀರಿನ ಮಟ್ಟವನ್ನು ತೆಗೆದುಕೊಂಡಾಗ ಸರ್ಕಾರ ಈ ವರ್ಷ ರೈತರಿಗೆ ಕುಡಿಯಲು ಮಾತ್ರ ನೀರು ಒದಗಿಸಿದೆಯಷ್ಟೆ, ನೀರಾವರಿಗೆ ನೀಡಿಲ್ಲ, ಗೊರೂರಿನಲ್ಲಿ ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಕೃಷ್ಣರಾಜ ಸಾಗರದಲ್ಲಿ ಕೂಡ ಇದೇ ಪರಿಸ್ಥಿತಿಯುಂಟಾಗಿದೆ.
ಹೇಮಾವತಿ ಅಣೆಕಟ್ಟಿನ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 37.103 ಟಿಎಂಸಿ ಅಡಿಯಾಗಿದೆ. ನಿನ್ನೆ ಇಲ್ಲಿ ಇದ್ದ ನೀರು 7.67 ಟಿಎಂಸಿ ಅಡಿ ಅದರಲ್ಲಿ 3.303 ಟಿಎಂಸಿ ಹರಿಯುತ್ತಿರುವ ನೀರು ಆಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ಇಲ್ಲಿ 16.87 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
ಹೇಮಾವತಿ ಅಣೆಕಟ್ಟಿನ ಗೊರೂರು ವಲಯದ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಎಸ್.ವಿ.ಶ್ರೀನಾಥ್ ಹೇಳುವ ಪ್ರಕಾರ, ಈ ವರ್ಷ ಕೃಷಿಗೆ ಬೇಕಾಗಿ ಆಗಸ್ಟ್ 12ರಿಂದ ಸೆಪ್ಟೆಂಬರ್ 21ರವರೆಗೆ ನೀರು ಬಿಡುಗಡೆ ಮಾಡಲಾಯಿತು. ರೈತರಿಗೆ ಅಗತ್ಯವಿದ್ದದ್ದು 43.68 ಟಿಎಂಸಿ ನೀರು. 11.35 ಟಿಎಂಸಿ ಅಡಿ ನೀರನ್ನು ಕಾಲುವೆಗೆ ನೀರಾವರಿಗೆ ಬಿಟ್ಟುಬಿಡಲಾಗಿದೆ. ರೈತರಿಗೆ ಹೇಗೆ ನೀರೊದಗಿಸುವುದು ಎಂದೇ ನಮಗೆ ಚಿಂತೆಯಾಗಿದೆ ಎನ್ನುತ್ತಾರೆ ಅವರು.
SCROLL FOR NEXT