ರಾಜ್ಯ

ವನ್ಯಜೀವಿ ಮೀಸಲು ಅಭಯಾರಣ್ಯದಲ್ಲಿ ಅನಧಿಕೃತ ರೆಸಾರ್ಟ್, ಹೋಂ ಸ್ಟೇಗಳು: ಕ್ರಮಕ್ಕೆ ಒತ್ತಾಯ

Sumana Upadhyaya
ಬೆಂಗಳೂರು: ಕರ್ನಾಟಕದ ವನ್ಯಜೀವಿ ಧಾಮ ಮತ್ತು ಹುಲಿ ಅಭಯಾರಣ್ಯಗಳ ಪರಿಸರ ಸೂಕ್ಷ್ಮ ವಲಯಗಳಲ್ಲಿ 24ಕ್ಕೂ ಹೆಚ್ಚು ರೆಸಾರ್ಟ್ ಗಳು ಮತ್ತು ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ರಾಜ್ಯ ಸರ್ಕಾರವೇ ಅನುಮತಿ ನೀಡಿದೆ.
ಕೆಲವಕ್ಕೆ ಅನುಮತಿ ನೀಡಿದ್ದರೆ ಇನ್ನು ಕೆಲವಕ್ಕೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಗತ್ಯ ಅನುಮೋದನೆ ಸಿಕ್ಕಿವೆ. ಇನ್ನು ಕೆಲವು ಹೋಂಸ್ಟೇ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಅಕ್ರಮ ಹೋಂ ಸ್ಟೇ, ರೆಸಾರ್ಟ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ವನ್ಯಮೃಗ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.
ವಲಯ ಪ್ರದೇಶಗಳಲ್ಲಿ ಇರುವ ಅಕ್ರಮ ರೆಸಾರ್ಟ್ ಗಳು, ಹೋಂ ಸ್ಟೇಗಳನ್ನು ಗುರುತಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಕಾಳಿ ಮತ್ತು ಭೀಮಗಡದಲ್ಲಿ ಅರಣ್ಯ ಇಲಾಖೆಯಿಂದ ಅಗತ್ಯ ಅನುಮೋದನೆ ಪಡೆಯಲು ರೆಸಾರ್ಟ್ ಮಾಲೀಕರಿಗೆ ನೊಟೀಸು ಕಳುಹಿಸಲಾಗಿದೆ. ಒಂದು ಅಕ್ರಮ ರೆಸಾರ್ಟ್ ನ್ನು ಕೆಡವಿ ಹಾಕಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅನ್ಮೊಡ್ ಟ್ರಿನಿಟಿ ರೆಸಾರ್ಟ್, ದೂದ್ ಸಾಗರ್ ರೆಸಾರ್ಟ್ ಮತ್ತು ಶಂಗ್ರಿಲ್ಲಾ ರೆಸಾರ್ಟ್ ಗೆ ಅನುಮತಿ ಪಡೆಯುವಂತೆ ಸೂಚಿಸಲಾಗಿದೆ ಎಂದು ಅರಣ್ಯ ಖಾತೆ ಸಚಿವ ರಮನಾಥ್ ರೈ ತಿಳಿಸಿದ್ದಾರೆ.
ಆದರೆ ವನ್ಯಜೀವಿ ಕಾರ್ಯಕರ್ತರು ಕಠಿಣ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಪ್ರಮುಖ ರೆಸಾರ್ಟ್ ಮತ್ತು ಹೋಂ ಸ್ಟೇಗಳು ಸೂಕ್ಷ್ಮ ವಲಯ ಪ್ರದೇಶಗಳಲ್ಲಿವೆ. ಅರಣ್ಯ ಇಲಾಖೆಯ ಸರಿಯಾದ ನೀತಿ, ನಿಯಮ ಮತ್ತು ಕಠಿಣ ನಿಲುವು ಇಲ್ಲದಿರುವುದರಿಂದ ಅನಧಿಕೃತ ರೆಸಾರ್ಟ್ ಗಳು ತಲೆಯೆತ್ತುತ್ತಿದ್ದು, ವನ್ಯಜೀವಿಗಳಿಗೆ ತೊಂದರೆಯಾಗುತ್ತಿದೆ ಎಂದು ವನ್ಯಜೀವಿ ಕಾರ್ಯಕರ್ತ ಜಿ.ವೀರೇಶ್ ಹೇಳುತ್ತಾರೆ.
SCROLL FOR NEXT