ಬೆಂಗಳೂರು: ಒಂದು ವರ್ಷ ಕಡ್ಡಾಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವುದರ ಬದಲು ದಂಡ ಕಟ್ಟುತ್ತೇವೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬಹುತೇಕ ಪದವೀಧರರು ಹೇಳಿದ ಮಾತು. ನಿನ್ನೆ ವಿಶ್ವವಿದ್ಯಾಲಯದ ಪದವೀಧರರು, ಸ್ನಾತಕೋತ್ತರ ಪದವೀಧರರಿಗೆ ಘಟಿಕೋತ್ಸವ ಏರ್ಪಡಿಸಲಾಗಿತ್ತು. ಅಲ್ಲಿ ವಿದ್ಯಾರ್ಥಿಗಳಿಂದ ಕೇಳಿಬಂದ ಅಭಿಪ್ರಾಯವಿದು.
ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯ ಸೇವೆ ಮಾಡಬೇಕೆನ್ನುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ತಂದಿದ್ದರೂ ಅದು ವೈದ್ಯಕೀಯ ಪದವೀಧರರಿಗೆ ಸಮಸ್ಯೆ ಕಾಡುವಂತೆ ಕಾಣುತ್ತಿಲ್ಲ.
ಐದೂವರೆ ವರ್ಷಗಳ ವೈದ್ಯಕೀಯ ಪದವಿ ನಂತರ ಒಂದು ವರ್ಷ ಗ್ರಾಮೀಣ ಸೇವೆ ಕಡ್ಡಾಯ ಮಾಡುವುದರಿಂದ ಸಮಯ ಬಹಳ ಹಿಡಿಯುತ್ತದೆ.ಗ್ರಾಮೀಣ ಸೇವೆ ಕಡ್ಡಾಯ ಮಾಡುವುದರ ಬದಲು ವೈದ್ಯಕೀಯ ಪದವೀಧರರಿಗೆ ಒಂದು ವರ್ಷದ ತರಬೇತಿ ಕಾರ್ಯಕ್ರಮ ಕಡ್ಡಾಯ ಮಾಡಲಿ ಎಂದು ವಿದ್ಯಾರ್ಥಿಯೊಬ್ಬರ ಅನಿಸಿಕೆಯಾಗಿದೆ.
ಬೆಂಗಳೂರಿನ ಆರ್ .ವಿ.ಡೆಂಟಲ್ ಕಾಲೇಜಿನ ಡಾ.ಅಭಿಷೇಕ್ ಪಾಠಕ್ ಬಿಡಿಎಸ್ ನಲ್ಲಿ ಅತಿ ಹೆಚ್ಚು ಚಿನ್ನದ ಪದಕ ಗಳಿಸಿದ್ದಾರೆ. ಡೆಂಟಲ್ ಕೋರ್ಸ್ ಗೆ ಹಳ್ಳಿ ಸೇವೆ ಕಡ್ಡಾಯವಾಗದಿದ್ದರೂ ಕೂಡ ಕೋರ್ಸ್ ಬಳಿಕ ಗ್ರಾಮೀಣ ಸೇವೆ ಮಾಡಬೇಕೆನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಅದರ ಬದಲು ಗ್ರಾಮೀಣ ಪ್ರದೇಶದಲ್ಲಿ ರೊಟೇಶನ್ ಮಾದರಿಯಲ್ಲಿ ಇಂಟರ್ನ್ ಷಿಪ್ ಮಾಡಲಿ ಎನ್ನುತ್ತಾರೆ.
ಎಂಬಿಬಿಎಸ್ ನಲ್ಲಿ ಅತಿ ಹೆಚ್ಚು ಚಿನ್ನದ ಪದಕ ಗಳಿಸಿದ ಡಾ.ದೀಪ್ತಿ ಅಗರ್ವಾಲ್, ಗ್ರಾಮೀಣ ಸೇವೆ ಕಡ್ಡಾಯ ಮಾಡಲು ಹೊರಟಾಗ ನಮ್ಮನ್ನು ನೇಮಕ ಮಾಡಿಕೊಂಡ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎನ್ನುತ್ತಾರೆ. ಮತ್ತೊಬ್ಬ ವಿದ್ಯಾರ್ಥಿ, ನಾನು ಸ್ನಾತಕೋತ್ತರ ಕೋರ್ಸ್ ಮಾಡಲು ನಿರ್ಧರಿಸಿದ್ದು ಈ ವರ್ಷವೇ ಸೇರಲು ಇಚ್ಛಿಸುತ್ತೇನೆ.ಕರಾರಿನಂತೆ ನಾನು ದಂಡ ಕಟ್ಟಲು ಸಿದ್ದಳಿದ್ದೇನೆ ಎಂದರು.
ವಿದ್ಯಾರ್ಥಿಗಳು ಸಹಿ ಹಾಕಿರುವ 2006ರ ಗ್ರಾಮೀಣ ಸೇವೆ ಪ್ರಕಾರ, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ದಂಡ 1 ಲಕ್ಷವಾಗಿದ್ದು, ಪಿಜಿ ಡಿಪ್ಲೊಮಾ ವಿದ್ಯಾರ್ಥಿಗಳಿಗೆ 3 ಲಕ್ಷ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 25 ಲಕ್ಷಗಳಾಗಿವೆ.ರಾಜ್ಯ ಸರ್ಕಾರ ದಂಡದ ಮೊತ್ತವನ್ನು 10 ಲಕ್ಷದಿಂದ 25 ಲಕ್ಷದೊಳಗೆ ಪರಿಷ್ಕರಿಸಲು ಯೋಜಿಸುತ್ತಿದೆ.
ತಜ್ಞರು ಕೂಡ ಗ್ರಾಮೀಣ ಸೇವೆಯನ್ನು ತರಬೇತಿಯನ್ನಾಗಿ ಪರಿಗಣಿಸುವಂತೆ ಒತ್ತಾಯಿಸುತ್ತಿದ್ದಾರೆ. ರಾಜ್ಯಾದ್ಯಂತ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರುಗಳ ಕೊರತೆಯನ್ನು ನಿವಾರಿಸಲು ವೈದ್ಯರಿಗೆ ಕಡ್ಡಾಯ ಗ್ರಾಮೀಣ ಸೇವೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಪ್ರಸ್ತುತ ಕರ್ನಾಟಕದಲ್ಲಿ 250 ವೈದ್ಯರುಗಳು ಮತ್ತು 900 ತಜ್ಞರ ಕೊರತೆಯಿದೆ.