ಬೆಂಗಳೂರು: ಕೇಂದ್ರ ತನಿಖಾ ವಿಭಾಗದ(ಸಿಐಡಿ)ಮಾನವ ಕಳ್ಳಸಾಗಣೆ ವಿರೋಧಿ ಘಟಕ 118 ಮಂದಿ ಜೀತದಾಳುಗಳನ್ನು ರಕ್ಷಿಸಿದ್ದಾರೆ. ಅವರಲ್ಲಿ 37 ಮಂದಿ ದೇವನಹಳ್ಳಿಯ ಇಟ್ಟಿಗೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಬಾಲಾಪರಾಧಿಗಳಾಗಿದ್ದಾರೆ.
ರಕ್ಷಿಸಲ್ಪಟ್ಟ ಜೀತದಾಳುಗಳೆಲ್ಲಾ ಒಡಿಶಾ ಮೂಲದವರಾಗಿದ್ದು, ಕಳೆದ 6 ತಿಂಗಳಿನಿಂದ ದೇವನಹಳ್ಳಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು 150 ಮಂದಿ ಕಾರ್ಮಿಕರನ್ನು ಒಡಿಶಾದಿಂದ ಮಾನವ ಕಳ್ಳಸಾಗಣೆ ಜಾಲದ ಮೂಲಕ ಬೆಂಗಳೂರಿಗೆ ಕರೆತರಲಾಗಿತ್ತು.
ಕಡಿಮೆ ವೇತನಕ್ಕೆ ತಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡಲು ಕಾರ್ಮಿಕರಿಗಾಗಿ ಮಾಲೀಕರು ಮಾನವ ಕಳ್ಳಸಾಗಣೆ ವ್ಯಾಪಾರಿಯನ್ನು ಸಂಪರ್ಕಿಸಿದ್ದರು. ಆ ವ್ಯಾಪಾರಿಯು ಕಾರ್ಮಿಕರಿಗೆ ಬೆಂಗಳೂರಿನಲ್ಲಿ ಉತ್ತಮ ವೇತನ ಮತ್ತು ವಸತಿ ವ್ಯವಸ್ಥೆ ಕೊಡಿಸುವುದಾಗಿ ನಂಬಿಸಿ ಕರೆತಂದಿದ್ದರು. ಇಲ್ಲಿ ಕರೆತಂದು ಕಾರ್ಮಿಕರನ್ನು ದಿನಕ್ಕೆ 14ರಿಂದ 16 ಗಂಟೆಗಳ ಕಾಲ ವಾರಕ್ಕೆ ಕೇವಲ 350 ರೂಪಾಯಿ ವೇತನ ಕೊಡಿಸಿ ಕೆಲಸ ಮಾಡಿಸುತ್ತಿದ್ದರು. ನಂತರ ಕಾರ್ಮಿಕರಿಗೆ ಯಾವಾಗಾದರೊಮ್ಮೆ ವೇತನ ನೀಡಲಾಗುತ್ತಿತ್ತು. ದಿನಕ್ಕೆ ಎರಡು ಬಾರಿ ಮಾತ್ರ ಊಟ ನೀಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಮಿಕರಿಗೆ ವಿಪರೀತ ಕಿರುಕುಳ ನೀಡಲಾಗುತ್ತಿತ್ತು. ಯಾರಾದರೂ ಅಗತ್ಯಕ್ಕೆ ಹಣ ಕೇಳಿದರೆ ಮತ್ತು ಕೂಲಿ ಮಾಡಲು ನಿರಾಕರಿಸಿದರೆ ಅವರನ್ನು ಹೊಡೆಯಲಾಗುತ್ತಿತ್ತು ಮತ್ತು ಬೆದರಿಕೆಯೊಡ್ಡಲಾಗುತ್ತಿತ್ತು. ಕಾರ್ಮಿಕರಿಗೆ ರಜೆಯಿರುತ್ತಿರಲಿಲ್ಲ. ಸಣ್ಣ ತಾತ್ಕಾಲಿಕ ಶೆಡ್ ನಲ್ಲಿ ಅವರಿಗೆ ಆಶ್ರಯ. ಬಾಲ ಕಾರ್ಮಿಕರು ಇಟ್ಟಿಗೆ ತಯಾರಿಸಲು ಮರಳನ್ನು ಹೊರಬೇಕಾಗುತ್ತಿತ್ತು. ಕೆಲವು ಕಾರ್ಮಿಕರು ಇಲ್ಲಿಂದ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿ ಪೊಲೀಸರಿಗೆ ದೂರು ನೀಡಿದರು. ಕಾರ್ಖಾನೆ ಮಾಲೀಕರ ವಿರುದ್ಧ ಕೇಸು ದಾಖಲಿಸಲಾಗಿದ್ದು ಆತ ಪರಾರಿಯಾಗಿದ್ದಾರೆ.
ಮಾನವ ಕಳ್ಳಸಾಗಣೆ ವ್ಯಾಪಾರದಲ್ಲಿ ತೊಡಗಿರುವವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಬಡ ಜನರನ್ನು ಶೋಷಣೆಗೊಳಪಡಿಸಿ ಕಳ್ಳಸಾಗಣೆದಾರರು ಕಮಿಷನ್ ಹೆಸರಿನಲ್ಲಿ ಹಣ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮ ಕುಟುಂಬದವರಿಗೆ ತೊಂದರೆ ನೀಡಬಹುದು ಎಂಬ ಭಯದಿಂದ ಕಾರ್ಮಿಕರು ಓಡಿಹೋಗಲು ಸಾಧ್ಯವಾಗುತ್ತಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos