ರೌಡಿ ಶೀಟರ್ ನಾಗರಾಜ್ ಅಲಿಯಾಸ್ ಬಾಂಬ್ ನಾಗ
ಬೆಂಗಳೂರು: ದರೋಡೆ ಹಾಗೂ ಉದ್ಯಮಿಗಳ ಅಪಹರಣದಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ನಾಗರಾಜ್ ಅಲಿಯಾಸ್ ಬಾಂಬ್ ನಾಗನ ಮನೆ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ದಾಳಿ ವೇಳೆ ಕೋಟ್ಯಾಂತರ ಬೆಲೆಯ ಹಳೇ ನೋಟುಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಶ್ರೀರಾಂಪುರದಲ್ಲಿರುವ ನಾಗರಾಜ ಅಲಿಯಾಸ್ ಬಾಂಬ್ ನಾಗನ ಕಚೇರಿ ಹಾಗೂ ಮನೆಯ ಮೇಲೆ ಇಂದು ಬೆಳಿಗ್ಗೆ ಪೊಲೀಸರು ದಾಳಿ ನಡೆಸಿದಾಗ ಆತನ ಕಚೇರಿಯಲ್ಲಿ ರೂ. 1000 ಹಾಗೂ 500 ಮುಖಬೆಲೆಯ ನಿಷೇಧಿತ ಹಳೇ ನೋಟುಗಳಿರುವ ಹಣದ ಬ್ಯಾಗ್ ಗಳು ಮತ್ತು ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಇದೇ ವೇಳೆ ಮನೆಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದಾಗ ಪೆಟ್ಟಿಗೆಯೊಂದರಲ್ಲಿ ರೂ.100 ಮುಖಬೆಲೆಯ ಕೋಟ್ಯಾಂತರ ಮೊತ್ತದ ಹಣ ದೊರೆತಿದೆ ಎಂದು ಮೂಲಗಳು ತಿಳಿಸಿವೆ.
ಉದ್ಯಮಿಗಳ ಅಪರಹಣ ಮತ್ತು ರೂ.50 ಲಕ್ಷ ಹಣ ಹಫ್ತಾ ಪಡೆದ ಪ್ರಕರಣದಲ್ಲಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡ ಬಳಿಕ ಹೆಣ್ಣೂರು ಪೊಲೀಸರು ಬಾಂಬ್ ನಾಗನ ಮನೆ ಮೇಲೆ ದಾಳಿ ನಡೆಸಿದ್ದಾರೆ.
ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡ ಬಳಿಕ ಪೊಲೀಸರು ಸಾಕಷ್ಟು ಸಿದ್ಧತೆಯೊಂದಿಗೆ ಬಾಂಬ್ ನಾಗನ ಮನೆಯನ್ನು ಪರಿಶೀಲನೆ ನಡೆಸಲು ಬಂದಿದ್ದಾರೆ. ಮನೆಯಲ್ಲಿ ಬಾಂಬ್ ನಾಗ ಸೇರಿದಂತೆ ಉಳಿದ ಸದಸ್ಯರಿದ್ದರೂ ಹಲವು ಬಾರಿ ಬಾಗಿಲು ಬಡಿದರೂ ಯಾರೊಬ್ಬರೂ ಬಾಗಿಲನ್ನು ತೆಗೆದಿಲ್ಲ. ಈ ಹಿನ್ನಲೆಯಲ್ಲಿ ಮನೆ ಬಾಗಿಲು ಒಡೆಯಲು ಪೊಲೀಸರು ಕೀ ಮೇಕರ್ ನಿಂದ ಹೊರ ಬಾಗಿಲು ತೆಗೆದಿದ್ದಾರೆ. ನಂತರ ಒಳಪ್ರವೇಶಿಸಿ ಶೋಧ ಕಾರ್ಯ ನಡೆಸಿದ್ದಾರೆಂದು ತಿಳಿದುಬಂದಿದೆ.
ಪ್ರಸ್ತುತ ಬಾಂಬ್ ನಾಗನ ಮೇಲೆ ನಗರದಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕಳೆದ ಬಾರಿ ಪೊಲೀಸರು ಬಂಧಿಸಲು ಹೋದಾಗ ಸಾವಿರಕ್ಕೂ ಹೆಚ್ಚು ಜನರಿಂದ ಪ್ರತಿಭಟನೆ ನಡೆಸಿದ್ದ. ಇತ್ತೀಚೆಗೆ ಬ್ಲ್ಯಾಕ್ ಆ್ಯಂಡ್ ವೈಟ್ ಮನಿ ದಂಧೆಯಲ್ಲೂ ಭಾಗಿಯಾಗಿದ್ದ.
ಶೋಧ ಕಾರ್ಯ ವೇಳೆ ಮನೆಯಲ್ಲಿ ಬಾಂಬ್ ನಾಗ ಅಡಗಿ ಕುಳಿತಿದ್ದ ಎನ್ನಲಾಗುತ್ತಿದ್ದು, ಪೊಲೀಸರು ಒಳ ನುಗ್ಗುತ್ತಿದ್ದಂತೆಯೇ ನೆರೆಮನೆಯ ಕಟ್ಟಡಗಳ ಸಹಾಯದಿಂದ ಪರಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಸುತ್ತಮುತ್ತಲಿನ ಕಟ್ಟಡಗಳಲ್ಲೂ ಪರಿಶೀಲನೆ ನಡೆಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos