ಹಂಪಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಭೇಟಿ
ಬಳ್ಳಾರಿ: ವಿಶ್ವವಿಖ್ಯಾತ ಪ್ರವಾಸಿತಾಣ ಹಂಪಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಭಾಯಿ ದಾಮೋದರ್ ಮೋದಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಭಾನುವಾರ ಭೇಟಿ ನೀಡಿ ವಿರೂಪಾಕ್ಷೇಶ್ವರ ಸ್ವಾಮಿ ದೇವರ ದರ್ಶನ ಪಡೆದು, ಸ್ವಾರಕಗಳನ್ನು ವೀಕ್ಷಿಸಿದರು.
ಶ್ರೀಶೈಲದಿಂದ ಶನಿವಾರ ರಾತ್ರಿ ಹೊಸಪೇಟೆಗೆ ಬಂದು, ನಗರದ ಅಮರಾವತಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದ ಪ್ರಹ್ಲಾದ್ ಅವರು, ಭಾನುವಾರ ತಮ್ಮ ಪತ್ನಿ ಶಾರದಾ ಬೆನ್ ಹಾಗೂ ಕುಟುಂಬಸ್ಥರೊಂದಿಗೆ ಹಂಪಿ ಸ್ಮಾರಕಗಳ ದರ್ಶನ ಮಾಡಿದರು.
ಈ ವೇಳೆ ಸ್ಥಳೀಯ ಹಾಗೂ ವಿದೇಶಿ ಪ್ರವಾಸಿಗರು ಪ್ರಹ್ಲಾದ್ ಮೋದಿಯವರೊಂದಿಗೆ ಫೋಟೋ ತೆಗೆಸಿಕೊಂಡರು, ನಂತರ ಸಂಜೆ ಪ್ರಹ್ಲಾದ್ ಮೋದಿಯವರು ಕುಟುಂಬ ಸಮೇತರಾಗಿ ಶೃಂಗೇರಿಗೆ ಪ್ರಯಾಣ ಬೆಳೆಸಿದರು.
ಭೇಟಿ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಪ್ರಹ್ಲಾದ್ ಮೋದಿಯವರು, ಹಂಪಿಗೆ ಭೇಟಿ ನೀಡಿದ ಅನುಭವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ವಿಶ್ವವಿಖ್ಯಾತ ಹಂಪಿಯಲ್ಲಿರುವ ಸ್ಮಾರಕಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಮೋದಿ ಸರ್ಕಾರದ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೋದಿಯವರ ಆಡಳಿತದ ಬಗ್ಗೆ ದೇಶದ ಜನತೆಯನ್ನೇ ಕೇಳಬೇಕೆಂದು ಹೇಳಿದರು.
ಪ್ರಹ್ಲಾದ್ ಮೋದಿಯವರು ತಮ್ಮ ಪತ್ನಿ, ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ 15 ದಿನಗಳ ಕಾಲ ಪ್ರವಾಸಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಶೃಂಗೇರಿ, ಮಂಗಳೂರು, ಮೈಸೂರು, ಶ್ರವಣಬೆಳಗೊಳ, ಪುದುಚೆರಿ, ಕನ್ಯಾಕುಮಾರಿ ಸೇರಿದಂತೆ ಇನ್ನಿತರೆ ಪ್ರವಾಸಿತಾಣಗಳಿಗೂ ಭೇಟಿ ನೀಡಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos