ಬೆಳಗಾವಿ: 23 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ವಿದ್ಯಾರ್ಥಿನಿಯನ್ನು ಸ್ನೇಹಿತೆಯೇ ತನ್ನ ಪ್ರಿಯಕರನೊಂದಿಗೆ ಸೇರಿ ಅಪರಹಣ ಮಾಡಿದ್ದು, ಇದೀಗ ಕಂಬಿ ಎಣಿಸುವಂತಾಗಿದೆ.
ಜಿಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಅರ್ಪಿತಾ ನಾಯಕ್, ಬೆಳಗಾವಿಯ ಟಿಳಕವಾಡಿ ಸಾಯಿ ಪ್ಲಾಜಾ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದಳು. ಏಪ್ರಿಲ್ 17ರ ರಾತ್ರಿ ಅರ್ಪಿತಾಳನ್ನು ಅಪಹರಣ ಮಾಡಲಾಗಿತ್ತು. ನಂತರ ತಾಯಿಗೆ ಕರೆ ಮಾಡಿ ತನ್ನನ್ನು ಅಪಹರಿಸಲಾಗಿದೆ ಎಂದು ಹೇಳಿದ್ದಳು. ಇದರಿಂದ ಆತಂಕಗೊಂಡ ಪೋಷಕರು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಟಿಳಕವಾಡಿ ಪೊಲೀಸರು ಪ್ರಕರಣ ಕೈಗೊಂಡ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 17ರ ರಾತ್ರಿ ಊಟಕ್ಕೆಂದು ಅರ್ಪಿತಾಳನ್ನು ಬೆಳಗಾವಿಯ ಹೊಟೇಲ್ ಒಂದಕ್ಕೆ ಸ್ನೇಹಿತೆ ಕರೆದುಕೊಂಡು ಹೋಗಿದ್ದಾಳೆ. ಊಟವಾದ ನಂತರ ಏಳನೀರಿನಲ್ಲಿ ನಿದ್ರೆ ಮಾತ್ರೆ ಹಾಕಿ ಅದನ್ನು ಅರ್ಪಿತಾಳಿಗೆ ಕುಡಿಸಿದ್ದಾರೆ. ಏಳುನೀರು ಕುಡಿದ ನಂತರ ಅರ್ಪಿತಾ ಮೂರ್ಛೆ ಹೋಗಿದ್ದಳು. ಬಳಿಕ ಆಕೆಗೆ ಕ್ಲೋರೋಫಾರ್ಮ ನೀಡಿ ಇಂಡಿಕಾ ಕಾರಿನಲ್ಲಿ ಅಪಹರಿಸಿ ಬೆಳಗಾವಿಯಿಂದ ಗದಗ ನಗರಕ್ಕೆ ಕರೆದೊಯ್ದು ಮನೆಯೊಂದರಲ್ಲಿ ಕಟ್ಟಿ ಹಾಕಿದ್ದರು.
ಅಪಹರಣಕಾರರು ನಂತರ ಅರ್ಪಿತಾಳ ತಂದೆ ಗೋವಿಂದಪ್ಪ ನಾಯಕ್ ಅವರಿಗೆ ಕರೆ ಮಾಡಿ ನಾವು ದಾವೂದ್ ಇಬ್ರಾಹಿಂ ಕಡೆಯವರು ಎಂದು ಹೇಳಿ 5 ಕೋಟಿ ರುಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಡಿಸಿಪಿ ಜಿ ರಾಧಿಕಾ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos