ರಾಜ್ಯ

ಮಂಗಳೂರು: ಬಜರಂಗ ದಳದ ಮುಖಂಡ ಶಂಕಾಸ್ಪದ ಸಾವು

Srinivasamurthy VN

ಮಂಗಳೂರು: ಮಂಗಳೂರು ನಗರದ ಬಜರಂಗ ದಳದ ಮುಖಂಡನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಬೆಂಗರೆ ಬೀಚ್ ನಲ್ಲಿ ಜಗದೀಶ್ ಸುವರ್ಣ ಅವರ ಶವ ಪತ್ತೆಯಾಗಿದೆ.

ಮೃತನನ್ನು 37 ವರ್ಷದ ಜಗದೀಶ್ ಸುವರ್ಣ ಎಂದು ಗುರುತಿಸಲಾಗಿದ್ದು. ಮಂಗಳೂರಿನ ಅಳಿವೆಬಾಗಿಲಿನ ಬೆಂಗರೆ ಬೀಚ್ ನಲ್ಲಿ ಶವ ಪತ್ತೆಯಾಗಿದೆ. ಗುರುವಾರ ರಾತ್ರಿ ಪಕ್ಕದ ಮನೆಯ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ  ಜಗದೀಶ್ ಸುವರ್ಣ ಅವರು, ನಸುಕಿನ ಜಾವ 3 ಗಂಟೆಯವರೆಗೂ ಅಲ್ಲಿಯೇ ಇದ್ದರು. ನಂತರ ಅಲ್ಲಿಂದ ಹೊರಟು ಹೋದರು ಎಂದು ಅವರ ಸ್ನೇಹಿತರೊಬ್ಬರು ತಿಳಿಸಿದ್ದಾರೆ. ಆದರೆ ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಅಳಿವೆ  ಬಾಗಿಲಿನ ಬಳಿ ಸಮುದ್ರದಲ್ಲಿ ಅವರ ಶವ ತೇಲುತ್ತಿರುವುದು ಕಂಡುಬಂದಿದೆ.

ಇದನ್ನು ಕಂಡ ಕೂಡಲೇ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ತೆರಳಿ ಶವವನ್ನು ಮೇಲಕ್ಕೆತ್ತಿ, ಮರಣೋತ್ತರ ಪರೀಕ್ಷೆಗಾಗಿ ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪಣಂಬೂರು  ಠಾಣೆ ಪೊಲೀಸರು ತಿಳಿಸಿದ್ದಾರೆ. 15 ವರ್ಷಗಳಿಂದ ಬಜರಂಗ ದಳದಲ್ಲಿ ಸಕ್ರಿಯರಾಗಿದ್ದ ಜಗದೀಶ್ ಸುವರ್ಣ, ಸಂಘಟನೆಯ ಬೆಂಗರೆ ಘಟಕದ ಸಂಚಾಲಕರಾಗಿದ್ದರು ಎಂದು ತಿಳಿದುಬಂದಿದೆ.

SCROLL FOR NEXT