ಹುಬ್ಬಳ್ಳಿ: ಪಾಕಿಸ್ತಾನಿ ಯುವತಿಯನ್ನು ವಿವಾಹವಾಗಿದ್ದ ಕರ್ನಾಟಕದ ಯುವಕ ಕೊನೆಗೂ ಆಕೆಯನ್ನು ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾನೆ.
ಡೇನಿಯಲ್ ದೇವನೂರ್ ಎಂಬಾತ 2016 ರಲ್ಲಿ ಲಾಹೋರ್ ಚರ್ಚ್ ನಲ್ಲಿ ತನ್ನ ದೂರದ ಸಂಬಂಧಿ ಸಿಲ್ವಿಯಾ ನೋರೇನ್ ಎಂಬಾಕೆಯನ್ನು ವಿವಾಹವಾಗಿದ್ದ. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಆಕೆಯನ್ನು ಭಾರತಕ್ಕೆ ಕರೆ ತರಲು ಸಾಧ್ಯವಾಗಿರಲಿಲ್ಲ.
ಕಳೆದ ಒಂದು ವರ್ಷದಿಂದ ನಡೆದ ಸತತ ಪ್ರಯತ್ನದಿಂದ ಕೊನೆಗೂ ದಂಪತಿ ನವದೆಹಲಿಯಲ್ಲಿ ಒಂದಾಗಿದ್ದಾರೆ. 2016ರ ಜೂನ್ ನಲ್ಲಿ ಲಾಹೋರ್ ನ ಯೋಹಾನಾ ಕಾಲೋನಿಯಲ್ಲಿರುವ ಚರ್ಚ್ ನಲ್ಲಿ ಇಬ್ಬರು ವಿವಾಹವಾಗಿದ್ದರು, ಆದರೆ ತನ್ನ ಪತ್ನಿಯನ್ನು ಭಾರತಕ್ಕೆ ಕರೆ ತರಲು ಸಾಧ್ಯವಾಗಿರಲಿಲ್ಲ. ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮಧ್ಯಸ್ಥಿಕೆಯಿಂದ ಇಬ್ಬರು ಒಂದಾಗಿದ್ದಾರೆ. ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಈ ದಂಪತಿ ಒಂದಾಗಲು ಮಾಡಿದ ಸಹಾಯದಿಂದಾಗಿ ಸಿಲ್ವಿಯಾ ಏಪ್ರಿಲ್ 19 ರಂದು ದೆಹಲಿಗೆ ಆಗಮಿಸಿದ್ದು, ಇನ್ನೆರಡು ದಿನಗಳಲ್ಲಿ ಹುಬ್ಬಳ್ಳಿ ತಲುಪಲಿದ್ದಾರೆ.
ಭಾರತ-ಪಾಕಿಸ್ತಾನ ವಿಭಜನೆಯಾದಾಗ ಸಿಲ್ವಿಯಾ ಕುಟುಂಬ ಪಾಕಿಸ್ತಾನಕ್ಕೆ ಶಿಫ್ಟ್ ಆಯಿತು. ಸಿಲ್ವಿಯಾ ನನ್ನ ದೂರದ ಸಂಬಂಧಿ, ನಮ್ಮ ಇನ್ನೂ ಹಲವು ಸಂಬಂಧಿಕರು ನವದೆಹಲಿ ಮತ್ತು ಲಂಡನ್,ಪಾಕಿಸ್ತಾನದಲ್ಲಿದ್ದಾರೆ. ಭಾರತ ಸರ್ಕಾರಕ್ಕೆ ಅದರಲ್ಲೂ ವಿಶೇಷವಾಗಿ ಸುಷ್ಮಾ ಸ್ವರಾಜ್ ಮತ್ತು ಪ್ರಹ್ಲಾದ್ ಜೋಶಿ ಅವರಿಗೆ ಆಭಾರಿಯಾಗಿದ್ದೇನೆ ಎಂದು ದೇವನೂರ್ ತಿಳಿಸಿದ್ದಾರೆ.
ತಮ್ಮ ವಿವಾಹದ ಫೋಟೋಗಳು ಮತ್ತು ಮದುವೆ ನೋಂದಣಿ ಪ್ರಮಾಣ ಪತ್ರವನ್ನು ದೇವನೂರ್ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ.
ಸುಷ್ಮಾ ಸ್ವರಾಜ್ ಅವರಿಗೆ ದೇವನೂರ್ ಟ್ವಿಟ್ಟರ್ ಮೂಲಕ ಮನವಿ ಸಲ್ಲಿಸಿದ್ದರು. ಆದರೆ ಎರಡು ದೇಶಗಳಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಯಾರೋಬ್ಬರು ಸಹಾಯ ಮಾಡಲು ಮುಂದಾಗಿರಲಿಲ್ಲ. ಹೀಗಾಗಿ ದೇನವೂರ್ ಸಂಸದ ಪ್ರಹ್ಲಾದ್ ಜೋಶಿಯನ್ನು ಸಂಪರ್ಕಿಸಿದ್ದರು. ನಂತರ ಸುಷ್ಮಾ ಸ್ವರಾಜ್ ಅವರ ಜೊತೆ ಚರ್ಚಿಸಿ ದೇವನೂರ್ ಅವರ ಪತ್ನಿಯನ್ನು ಭಾರತಕ್ಕೆ ಕರೆ ತರುವಲ್ಲಿ ಪ್ರಹ್ಲಾದ್ ಜೋಶಿ ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos