ಬೆಂಗಳೂರು: ತನ್ನನ್ನು ಬಾಂಬ್ ನಾಗ ಎಂದು ಕರೆಯದಂತೆ ನಗರ ಪೊಲೀಸ್ ಆಯುಕ್ತರಿಗೆ ಮಾಜಿ ಕಾರ್ಪೋರೇಟರ್ ನಾಗರಾಜ ತನ್ನ ವಕೀಲರ ಮೂಲಕ ನೊಟೀಸ್ ಕಳುಹಿಸಿದ್ದಾನೆ.
ತಲೆ ಮರೆಸಿಕೊಂಡಿರುವ ರೌಡಿಶೀಟರ್ ವಿ.ನಾಗರಾಜ್ ವಕೀಲರ ಮೂಲಕ ನಗರ ಪೊಲೀಸ್ ಕಮಿಷನರ್ಗೆ ಶುಕ್ರವಾರ ನೋಟಿಸ್ ಕಳುಹಿಸಿದ್ದಾನೆ.
ನನ್ನ ಹೆಸರನ್ನು ನಾಗ, ಬಾಂಬ್ ನಾಗ, ಪಾಲ್ ನಾಗ ಎಂದು ಕರೆಯಲಾಗುತ್ತಿದೆ. ಪೊಲೀಸ್ ದಾಖಲೆಗಳಲ್ಲೂ ಹಾಗೆಯೇ ಬರೆದುಕೊಳ್ಳಲಾಗಿದೆ. ಇದರಿಂದ ಸಮಾಜದಲ್ಲಿ ನನ್ನ ಗೌರವಕ್ಕೆ ಧಕ್ಕೆಯಾಗಿದೆ ಎಂದು ನಾಗರಾಜ್ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದ. ಆತನ ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಾಧೀಶರು, ಇನ್ನು ಮುಂದೆ ವಿ.ನಾಗರಾಜ್ ಎಂದೇ ಕರೆಯಬೇಕು ಎಂದು 2015ರ ಜೂನ್ನಲ್ಲಿ ಸೂಚಿಸಿದ್ದರು. ಆ ನಂತರ ಪೊಲೀಸರು ದಾಖಲಾತಿಗಳಲ್ಲಿ ನಾಗರಾಜ್ನ ಅಡ್ಡ ಹೆಸರುಗಳನ್ನು ತೆಗೆದಿದ್ದರು.
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಏ. 14 ರಂದು ಹೆಣ್ಣೂರು ಪೊಲೀಸರು ನಾಗರಾಜ್ ಮನೆ ಮೇಲೆ ದಾಳಿ ಮಾಡಿದ್ದರು. ಆ ದಾಳಿಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಹೆಚ್ಚುವರಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್, ‘ಬಾಂಬ್ ನಾಗ’ ಎಂದೇ ಕರೆದಿದ್ದಾರೆ. ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಇದನ್ನು ಕಮಿಷನರ್ ಅವರ ಗಮನಕ್ಕೆ ತರಲಾಗಿದೆ’ ಎಂದು ನಾಗರಾಜ್ ಪರ ವಕೀಲ ಶ್ರೀರಾಮರೆಡ್ಡಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಆತನನ್ನು ಬಾಂಬ್ ನಾಗ ಎಂದು ಸಂಬೋಧಿಸಿದರೇ ನಿಂದನೆ ಕೇಸು ದಾಖಲಿಸುವುದಾಗಿ ಆತ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos