ಕಾರವಾರ: ಭಟ್ಕಳದ ಹೆಸರನ್ನು ಜಾಗತಿಕ ಮಟ್ಟದ ಭಯೋತ್ಪಾದಕ ಪಟ್ಟಿಯಲ್ಲಿ ಸೇರಿಸಿದ ಉಗ್ರರಲ್ಲಿ ಒಬ್ಬನಾದ ಯೂಸೂಫ್ ಆಲ್ ಹಿಂದಿ ಅಲಿಯಾಸ್ ಮೊಹಮದ್ ಶಫೀ ಅರ್ಮರ್ ಅಥವಾ ಉಂಜಾನ್ ಬಾಯ್ ಇತ್ತೀಚೆಗೆ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಮೇಲೆ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ ನಡೆಸಿದ ದಾಳಿಯಲ್ಲಿ ಹತ್ಯೆಯಾಗಿದ್ದಾನೆ ಎಂಬ ಸುದ್ದಿ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಶಫಿ ಆರ್ಮರ್ ಕುಟುಂಬಸ್ಥರು ಎಷ್ಟು ಬಾರಿ ನೀವು ನಮ್ಮ ಸಹೋದರನನ್ನು ಕೊಲ್ಲುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಕಳೆದ 10 ವರ್ಷಗಳಿಂದ ಶಫಿಯ ಜೊತೆ ನಮ್ಮ ಕುಟುಂಬ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಸ್ಪಷ್ಟಪಡಿಸಿರುವ ಕುಟುಂಬಸ್ಥರು, ಪದೇ ಪದೇ ಶಫಿ ಸಾವಿನ ಸುದ್ದಿ ಕೇಳಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಎಷ್ಟು ಬಾರಿ ನಮ್ಮ ಸಹೋದರನನ್ನು ಕೊಲ್ಲುತ್ತೀರಿ, ಕಳೆದ ಬಾರಿ ಶಫಿಯನ್ನು ಕೊಂದಿರುವುದಾಗಿ ಸುದ್ಧಿ ಕೇಳಿದೆವು, ಅದಾದ ಕೆಲ ದಿನಗಳ ನಂತರ ಯುಎಸ್ ಎಜೆನ್ಸಿಯೊಂದು ಜಾಗತಿಕ ಮಟ್ಟದ ಭಯೋತ್ಪಾದಕರ ಪಟ್ಟಿಗೆ ಭಟ್ಕಳದ ಶಮಿಯ ಹೆಸರನ್ನು ಸೇರಿಸಲಾಗಿದೆ ಎಂದು ಹೇಳಿತ್ತು.
ಕಳೆದ ಎರಡು ತಿಂಗಳ ಹಿಂದೆ ಅಮೆರಿಕಾದ ಹಣಕಾಸು ಇಲಾಖೆ ಭಟ್ಕಳ ಶಮಿ ಭಾರತದಲ್ಲಿ ಐಎಸ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಹೇಳಿತ್ತು. ಆದರೆ ಭಾರತೀಯ ಗುಪ್ತಚರ ಇಲಾಖೆ ಇದುವರೆಗೂ ಶಫಿ ಸಾವಿನ ಬಗ್ಗೆ ಖಚಿತ ಮಾಹಿತಿ ನೀಡುತ್ತಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಮೊನ್ನೆ ಸೋಮವಾರ ಐಸ್ ತನ್ನ ಮುಖವಾಣಿ ಅಮಾಖ್ ನಲ್ಲಿ ಭಾರತೀಯ ಮೂಲದ ಉಗ್ರ ಇಂಡಿಯನ್ ಆಲ್ ಹಿಂದಿ ಅಸ್ಟ್ರೇಲಿಯನ್ ಹೋರಾಟಗಾರ ಅಬು ಪಹಾದ್ ಜೊತೆ ಕುರ್ದಿಸ್ತಾನ್ ವರ್ಕರ್ಸ್ ಜೊತೆಗಿನ ಹೋರಾಟದಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳಿದೆ. ಆದರೆ ಯಾವುದೇ ಎಜೆನ್ಸಿಗಳು ಶಫೀ ಸಾವಿನ ಮಾಹಿತಿಯನ್ನು ಖಚಿತ ಪಡಿಸಿಲ್ಲ, ಆದರೆ ಪದೇ ಪದೇ ಶಫಿ ಸಾವಿನ ಸುದ್ದಿ ಕೇಳಿ ಕೇಳಿ ತಮಗೆ ಸಾಕಾಗಿದೆ ಎಂದು ಆತನ ತಾಯಿ ಮತ್ತು ಸಹೋದರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕಳೆದ 10 ವರ್ಷಗಳಿಂದ ಆತನ ಜೊತೆ ನಮಗೆ ಸಂಪರ್ಕವಿಲ್ಲ ಎಂದು ಶಫಿ ಸಹೋದರ ಸಾಫ್ವಾನ್ ಹೇಳಿದ್ದಾರೆ, ಶಫಿ ಆರ್ಮರ್ ತನ್ನ ಮತ್ತೊಬ್ಬ ಸಹೋದರ ಸುಲ್ತಾನ್ ಅಬ್ದುಲ್ ಖಾದೀರ್ ಇಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಯಾಸೀನ್ ಭಟ್ಕಳ್ ಜೊತೆ ಗುರುತಿಸಿಕೊಂಡಿದ್ದ. ಆದರೆ ನಂತರ ಅವನ ಜೊತೆಗಿನ ಭಿನ್ನಾಭಿಪ್ರಾಯ ನಂತರ, ಸುಲ್ತಾನ್ ಸಿರಿಯಾಗೆ ತನ್ನ ಕಿರಿಯ ಸಹೋದರ ಶಫಿ ಜೊತೆ ತೆರಳಿದ್ದ. 2015 ರಲ್ಲಿ ನಡೆದ ದಾಳಿಯಲ್ಲಿ ಸುಲ್ತಾನ್ ನನ್ನು ಕೊಲ್ಲಲಾಯಿತು.
ಎಸ್ ಎಸ್ ಎಲ್ ಸಿ ಪೂರ್ಣಗೊಂಡ ನಂತರ, ಶಫಿ ಲಕ್ನೋದಲ್ಲಿ ನಡೆದ ನದ್ವಾತ್ ಉಲ್ ಉಲೆಮ್ಮಾ ಸೆಮಿನಾರ್ ನಲ್ಲಿ ಭಾಗವಹಿಸಿದ್ದ. ರಾಷ್ಟ್ರೀಯ ತನಿಖಾ ದಳದ ಪ್ರಕಾರ, 2008 ರಲ್ಲಿ ಐಎಂ ಸಂಘಟನೆ ಭಯೋತ್ಪಾದರ ಬಂಧನದ ನಂತರ ಸುಲ್ತಾನ್ ಮತ್ತು ಶಫಿ ಕರಾಚಿಗೆ ಪರಾರಿಯಾಗಿದ್ದರು. ನಂತರ ಇಬ್ಬರು ಐಸಿಸ್ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.ಶಫಿಯ ಮತ್ತೊಬ್ಬ ಸಹೋದರ ದುಬೈನಲ್ಲಿ ಕೆಲಸ ಮಾಡುತ್ತಿದ್ದು ಎಷ್ಟೇ ವರ್ಷಗಳಾದರೂ ಭಾರತಕ್ಕೆ ವಾಪಸಾಗಲಿಲ್ಲ, ತನಿಖೆ ನಡೆಸುತ್ತಾರೆ ಎಂಬ ಉದ್ದೇಶ ಮತ್ತಿತರ ಕಾರಣಗಳಿಂದ ಆತ ಭಾರತಕ್ಕೆ ಬರಲಿಲ್ಲ, ಶಫಿ ಕಿರಿಯ ಸಹೋದರ ಭಟ್ಕಳದಲ್ಲಿದ್ದು ಆತನ ತಂದೆ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ.