ಕಾರ್ವಾರ: ಉತ್ತರ ಕನ್ನಡದ ಜಿಲ್ಲೆಯಲ್ಲಿ ಹತ್ಯೆಯಾಗಿದ್ದ ಯುವಕ ಪರೇಶ್ ಮೇಸ್ತಾ ಕುಟುಂಬಕ್ಕೆ ಸಚಿವ ಆರ್ ವಿ ದೇಶಪಾಂಡೆ 1 ಲಕ್ಷ ರೂಪಾಯಿ ಪರಿಹಾರ ನೀಡಿದ್ದು, ನಮಗೆ ಸಚಿವರು ನೀಡಿರುವ ಪರಿಹಾರ ಧನ ಬೇಡ, ನ್ಯಾಯ ಬೇಕು ಎಂದು ಪರೇಶ್ ಮೇಸ್ತಾ ಅವರ ತಂದೆ ಕಮಲಾಕರ್ ಮೇಸ್ತಾ ಹೇಳಿದ್ದಾರೆ.
ಹೊನ್ನಾವರದಲ್ಲಿ ಮಾತನಾಡಿರುವ ಕಮಲಾಕರ್ ಮೇಸ್ತಾ, ಪರೇಶ್ ಮೇಸ್ತಾ ಮೀನುಗಾರಿಕೆ ಸಮುದಾಯದ ಧೈರ್ಯವಂತ ಬಾಲಕನಾಗಿದ್ದ, ಆತನಿಗೆ ಈಜು ಚೆನ್ನಾಗಿ ಬರುತ್ತಿತ್ತು. ಆತ ನೀರಿನಲ್ಲಿ ಮುಳುಗಿರುವುದನ್ನು ಕೇಳಿ ಅಚ್ಚರಿಯಾಯಿತು. ಪರೇಶ್ ಮೇಸ್ತಾನದ್ದು ಸಹಜ ಸಾವಲ್ಲ ಎಂದು ಹೇಳಿದ್ದಾರೆ.
ಪರೇಶ್ ಮೇಸ್ತಾನದ್ದು ಹತ್ಯೆ, ಆದರೆ ಪೊಲೀಸರು ಅದನ್ನು ಮುಚ್ಚಿಹಾಜಲು ಯತ್ನಿಸುತ್ತಿದ್ದಾರೆ. ಸಚಿವ ದೇಶಪಾಂಡೆ ಹಾಗೂ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರ ವಿರುದ್ಧವೂ ಆರೋಪ ಮಾಡಿರುವ ಕಮಲಾಕರ್ ಮೇಸ್ತಾ, ಇಬ್ಬರೂ ಗೊಂದಲ ಉಂಟು ಮಾಡುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪೊಲೀಸ್ ತನಿಖೆ ಮೇಲೆ ನಮಗೆ ವಿಶ್ವಾಸವಿಲ್ಲ. ನಮಗೆ ನ್ಯಾಯ ಬೇಕು ಎಂದು ಹೇಳಿದ್ದು, ಪರೇಶ್ ಮೇಸ್ತಾ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ ಆತನೊಬ್ಬ ಧೈರ್ಶಶಾಲಿ ಹಿಂದೂ ಆಗಿದ್ದ ಎಂದು ಹೇಳಿದ್ದಾರೆ.