ಬೆಂಗಳೂರು: ಮುಂದಿನ ಮಾರ್ಚ್/ ಎಪ್ರಿಲ್ ತಿಂಗಳಿನಲ್ಲಿ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆ ಬರೆಯಲಿರುವ 16,000ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ.ತಮ್ಮ ಶಾಲೆಯ ಮುಖ್ಯಸ್ಥರ ನಿರ್ಲಕ್ಷ್ಯದಿಂದಾಗಿ ಈ ಮಕ್ಕಳು ಪರೀಕ್ಷೆ ಬರೆಯಲು ಸಾಧ್ಯವಾಗದಿರಬಹುದು. ಸುಮಾರು 327 ಶಾಲೆಗಳು ತಮ್ಮ ಶಾಲೆಯ ಅಂಗೀಕಾರವನ್ನು ನವೀಕರಿಸದಿದ್ದು ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಪ್ರಾಧಿಕಾರ ಈ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ.
ಹಲವು ಸಲ ಮನವಿ ಮಾಡಿಕೊಂಡರೂ ಸಹ ಅಂಗೀಕಾರ ನವೀಕರಣಕ್ಕೆ ಈ ಶಾಲೆಗಳು ಅರ್ಜಿ ಸಲ್ಲಿಸಿಲ್ಲ. ಇದರಿಂದಾಗಿ ಇಡೀ ವರ್ಷ ಮಕ್ಕಳು ಕಳೆದುಕೊಳ್ಳುವಂತಾಗಿದೆ. ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮ ಪ್ರಕಾರ, ಯಾವ ಶಾಲೆಗಳು ಅನುಮತಿ ನವೀಕರಿಸಲಿಲ್ಲವೊ ಅಂತಹ ಶಾಲೆಗಳು ಅನಧಿಕೃತ ಎಂದು ಪರಿಗಣಿಸಲಾಗುತ್ತದೆ. ಶಾಲಾ ಮುಖ್ಯಸ್ಥರು ಶಾಲಾ ಅನುಮತಿ ನವೀಕರಣಕ್ಕೆ ತಕ್ಷಣವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಕೊನೆ ವೇಳೆಯಲ್ಲಿ ನಮ್ಮನ್ನು ಸಂಪರ್ಕಿಸಿದರೆ ನಾವು ಅಸಹಾಯಕರು ಎನ್ನುತ್ತಾರೆ ಅಧಿಕಾರಿಗಳು. ಪ್ರತಿ ಐದು ವರ್ಷಗಳಿಗೊಮ್ಮೆ ಶಾಲೆಗಳ ಅನುಮತಿ ನವೀಕರಣವಾಗಬೇಕಿದೆ.
ಈ ಮಧ್ಯೆ ಕೆಲವು ತಾಲ್ಲೂಕುಗಳಲ್ಲಿ 25 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಶಾಲೆಗಳಿಗೆ ಅನುಮತಿ ನಿರಾಕರಿಸಲಾಗಿದೆ ಎಂಬ ಸುದ್ದಿಯಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವ್ಯವಸ್ಥಾಪಕರ ಒಕ್ಕೂಟದ ಪ್ರಧಾನಿ ಕಾರ್ಯದರ್ಶಿ ಡಿ.ಶಶಿ ಕುಮಾರ್, ಶಾಲೆಗಳ ನವೀಕರಣಕ್ಕೆ ಅದು ಕಾರಣವಾಗಿರಲಿಕ್ಕಿಲ್ಲ. ಕನಿಷ್ಠ 25 ವಿದ್ಯಾರ್ಥಿಗಳಿರಬೇಕೆಂಬ ನಿಯಮ ಹಲವು ವರ್ಷಗಳಿಂದ ಇದೆ. ಆದರೆ ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಿಕ್ಷಣ ಇಲಾಖೆ ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದು, ಶಾಲೆಗಳ ನವೀಕರಣಕ್ಕೆ ಇದು ಕಾರಣವಾಗಿರಲಿಕ್ಕಿಲ್ಲ. ಕೆಲವು ಅಧಿಕಾರಿಗಳು ಶಾಲೆಗಳ ಮುಖ್ಯಸ್ಥರಿಗೆ ತಪ್ಪು ಮಾರ್ಗದರ್ಶನ ನೀಡುತ್ತಾರೆ ಎಂದರು.