ಬೆಂಗಳೂರು: ಮಾಜಿ ಶಾಸಕರ ಪುತ್ರ ಹಾಗೂ ಪೋಲೀಸರ ನಡುವೆ ತೀವ್ರ ವಾಗ್ವಾದಕ್ಕೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೋಲೀಸ್ ಠಾಣೆ ಸಾಕ್ಷಿಯಾಗಿದೆ. ಉಡುಪಿ ಕ್ಷೇತ್ರದ ಮಾಜಿ ಶಾಸಕ ಜಯರಾಮ ಶೆಟ್ಟಿ ಅವರ ಪುತ್ರ ರತನ್ ಶೆಟ್ಟಿ ಹಾಗೂ ಕಬ್ಬನ್ ಪಾರ್ಕ್ ಸಂಚಾರಿ ಪೋಲೀಸರ ನಡುವೆ ಈ ವಾಗ್ವಾದ ನಡೆದಿತ್ತು. ಅಂತಿಮವಾಗಿ ಪರಸ್ಪರರು ಕ್ಷಂಆಪಣೆ ಕೇಳಿಕೊಳ್ಳುವ ಮೂಲಕ ವಿವಾದ ಇತ್ಯರ್ಥವಾಗಿದೆ.
ಘಟನೆ ವಿವರ: ಮಂಗಳವಾರ ರಾತ್ರಿ 11.30ರ ಸುಮಾರಿಗೆ ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಪಾನಮತ್ತ ಚಾಲಕರ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸುತ್ತಿದ್ದಾಗ ರತನ್ ಶೆಟ್ಟಿ ಎಂಜಿ ರಸ್ತೆ ಕಡೆಯಿಂದ ಬಂದಿದ್ದಾರೆ. ಸಿಗ್ನಲ್ ದಾಟಿದ ನಂತರ ರಸ್ತೆ ಬದಿಯಲ್ಲಿ ಕಾರ್ ನಿಲ್ಲಿಸಿದ್ದಾರೆ. ಆಗ ಅಲ್ಲಿಗೆ ಆಗಮಿಸಿದ ಸಂಚಾರಿ ಪೋಲೀಸರೊಬ್ಬರು "ಪ್ರಕರಣ ದಾಖಲಿಸುತ್ತೇವೆನ್ನುವ ಭಯಕ್ಕೆ ಇಲ್ಲಿ ಕಾರ್ ನಿಲ್ಲಿಸಿದ್ದೀರಿ? ಕಾರ್ ನಿಂದ ಕೆಳಗಿಳಿಯಿರಿ ಎಂದಾಗ ಕಾರ್ ಚಾಲಕ ಹರೀಶ್ ಕೆಳಗಿಳಿದರಾದರೂ ಅಲ್ಲೇ ಮೂತ್ರ ವಿಸರ್ಜನೆಗೆ ಹೋಗಿದ್ದ ರತನ್ "ನಾವು ಯಾರ ಭಯದಿಂದ ಕಾರ್ ನಿಲ್ಲಿಸಿಲ್ಲ, ನಾನು ಮೂತ್ರ ವಿಸರ್ಜನೆಗೆ ತೆರಳಿದ್ದೆ. ಅದಕ್ಕೆ ಕಾರ್ ನಿಲ್ಲಿಸಿದ್ದೆವು" ಎಂದು ಪೋಲೀಸರೊಡನೆ ವಾದ ಹೂಡಿದ್ದಾರೆ.
ಆದರೆ ಪೋಲೀಸರು ಅವರನ್ನು ಹಿರಿಯ ಅಧಿಕಾರಿಗಳ ಬಳಿ ತೆರಳಲು ಹೇಳಿದ್ದಾರೆ. ಆಗ ರತನ್ "ನಾಣು ಫಾನಮತ್ತನಾಗಿದ್ದೇನೆ, ಕಾರ್ ನಡೆಸುತ್ತಿರುವ ಚಾಲಕ ಹರೀಶ್ ಮದ್ಯ ಸೇವಿಸಿಲ್ಲ. ನಾವು ಕಾನೂನು ಉಲ್ಲಂಘಿಸಿಲ್ಲ. ನೀವು ಇದೀಗ ತಾನೆ ಒನ್ ವೇ ನಲ್ಲಿ ಬೈಕ್ ತಂದು ನಿಯಮ ಉಲ್ಲಂಘಿಸಿದ್ದೀರಿ" ಎಂದರು. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.ಪೋಲೀಸರು ಇಬ್ಬರನ್ನೂ ಠಾಣೆಗೆ ಕರೆದೊಯ್ದಿದ್ದಾರೆ.
ಠಾಣೆಯಲ್ಲಿ ವಿಚಾರಿಸಲು ರತನ್ ಮಾಜಿ ಶಾಸಕರ ಮಗ ಎಂದು ತಿಳಿದಿದೆ. ಇದೊಂದು ಸಾಮಾನ್ಯ ಪ್ರಕರಣ ಎಂದು ಪರಿಗಣಿಸಿದ ಪೋಲೀಸರು ರತನ್ ನಿಂದ ಕ್ಷಮಾಪಣಾ ಪತ್ರ ಬರೆಸಿಕೊಂಡು ಬಿಟ್ಟು ಕಳಿಸಿದ್ದಾರೆ. ಪೋಲೀಸರೂ ಸಹ ರತನ್ ಕ್ಷಮೆ ಕೇಳಿದ್ದಾರೆ. ಪ್ರಕರಣ ಸುಖಾಂತವಾಗಿದೆ.