ಬೆಂಗಳೂರು: ಕೆಎಸ್ ಆರ್ ಟಿಸಿ ಬಸ್ ಗೆ ಬೆಂಕಿ ಬಿದ್ದು ಅದರಲ್ಲಿದ್ದ ಪ್ರಯಾಣಿಕರು ಹೊರಬರಲು ಪರದಾಡುತ್ತಿದ್ದರು. ಈ ವೇಳೆ ವಾಹನಗಳನ್ನು ನಿಲ್ಲಿಸಿದ್ದ ಕೆಲ ಜನ ಬೆಂಕಿಯಿಂದ ಹೊರಬರಲು ಸಹಾಯ ಮಾಡುವ ಬದಲು ತಮ್ಮ ಮೊಬೈಲ್ ಗಳಲ್ಲಿ ಫೋಟೋ ತೆಗೆಯುವಲ್ಲಿ ನಿರತರಾಗಿದ್ದರು.
ಚಂದ್ರಮ್ಮ ಎಂಬುವರು ಹೇಗೊ ತಪ್ಪಿಸಿಕೊಂಡು ಹೊರಬಂದಿದ್ದರು. ಆದರೆ ಅವರ ಚಿಕ್ಕಮ್ಮ , ಭಾಗ್ಯಮ್ಮ ಬೆಂಕಿಗೆ ಸಿಲುಕಿ ಪಟ್ಟಿದ್ದರು. ಈ ವೇಳೆ ಚಂದ್ರಮ್ಮ ತಮ್ಮ ಸಂಬಂಧಿ ಮಂಜುನಾಥ ಸ್ವಾಮಿಗೆ ಕರೆ ಮಾಡಿ ವಿಳಾಸ ತಿಳಿಸಿದ್ದರು. ತಕ್ಷಣಕ್ಕೆ ಸ್ಥಳಕ್ಕೆ ಮಂಜುನಾಥ ಸ್ವಾಮಿ ಬಂದಿದ್ದರು, ಅಲ್ಲಿ ನೆರೆದಿದ್ದ ಗುಂಪಿನ ಬಳಿ ಬಂದಾಗ ಅವರಿಗೆ ಆಘಾತವಾಗಿತ್ತು.
ಗುಂಪಿನಲ್ಲಿ ಸೇರಿದ್ದ ಮಂದಿ ಅಳುತ್ತಿದ್ದ ಪ್ರಯಾಣಿಕರಿಗೆ ಸಹಾಯ ಮಾಡುವ ಬದಲು ಮೊಬೈಲ್ ಫೋನ್ ಗಳಲ್ಲಿ ಫೋಟೊ ತೆಗೆಯುತ್ತಿದ್ದರು. ಯಾರೊಬ್ಬರು ಸಹಾಯ ಮಾಡಲು ಬರಲಿಲ್ಲ, ಇಲ್ಲವೇ ಪೊಲೀಸರಿಗೆ ವಿಷಯ ಕೂಡ ತಿಳಿಸಲಿಲ್ಲ. ಅದು ಭಯಾನಕವಾಗಿತ್ತು ಎಂದು ಮಂಜುನಾಥಸ್ವಾಮಿ ವಿವರಿಸಿದ್ದಾರೆ.
ಮಗುವನ್ನು ಕಿಟಕಿಯ ಮೂಲಕ ಹೊರ ಕಳುಹಿಸಲಾಗಿತ್ತು, ತುರ್ತು ನಿರ್ಗಮನದ ಮೂಲಕ ಮಹಿಳೆಯೊಬ್ಬರು ಹೊರಬರಲು ಯತ್ನಿಸುತ್ತಿದ್ದರು. ಪ್ರಯಾಣಿಕರು ಭಯದಿಂದ ಕೂಗಾಡುತ್ತಿದ್ದರು, ಆದರೆ ಅಲ್ಲಿ ನೆರೆದಿದ್ದ ಜನ ಮಾನವೀಯಕತೆ ಮರೆತು ವಿಡಿಯೋ ರೆಕಾರ್ಡ್ ಮಾಡುವುದರಲ್ಲಿ ಬ್ಯುಸಿಯಾಗಿದ್ದರು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಪ್ರಕರಣದಲ್ಲಿ ಗಾಯಗೊಂಡಿದ್ದ ಮಮತಾ ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು, ತನ್ನಿಂದ ದೂರಾಗಿದ್ದ ಪತಿ ಸುರೇಶ್ ನನ್ನು ನೋಡಬೇಕು ಎಂದು ಮನವಿ ಮಾಡಿದರು. ಟಿವಿ ಚಾನೆಲ್ ಗಳಲ್ಲಿ ಸುದ್ದಿ ನೋಡಿದ ಮಮತಾ ಪತಿ ಸುರೇಶ್ ಮಮತಾ ದಾಖಲಾಗಿದ್ದ ಆಸ್ಪತ್ರೆಗೆ ಬಂದು ಪತ್ನಿಯನ್ನು ಭೇಟಿ ಮಾಡಿದ್ದಾರೆ. ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.