ಬೆಂಗಳೂರು: ಜ.7 ರಂದು ಪ್ರವಾಸಿ ಭಾರತೀಯ ದಿವಸ್ ಗೆ ಚಾಲನೆ ದೊರೆತಿದ್ದು, ರಾಜ್ಯ ಸರ್ಕಾರ ಅನಿವಾಸಿ ಕನ್ನಡಿಗರನ್ನು ಪ್ರೋತ್ಸಾಹಿಸಿ ಹೂಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ನಿಯಮಾವಳಿಗಳನ್ನು ಬಿಡುಗಡೆ ಮಾಡಿದ್ದು, ಎನ್ಆರ್ ಕೆ( ನಾನ್ ರೆಸಿಡೆಂಟ್ ಕನ್ನಡಿಗ) ಕಾರ್ಡ್ ನೀಡುವುದು ಹಾಗೂ ಹೆಚ್ಚಿನ ಹೂಡಿಕೆಗೆ ಪ್ರೋತ್ಸಾಹ ನೀಡುವುದು ಸೇರಿದಂತೆ ಅನಿವಾಸಿ ಕನ್ನಡಿಗರನ್ನು ಪ್ರೋತ್ಸಾಹಿಸುವ ವಿವಿಧ ಅಂಶಗಳನ್ನೊಳಗೊಂಡಿದೆ.
ನಿಯಮಾವಳಿಗಳನ್ನು ಬಿಡುಗಡೆ ಮಾಡಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಅನಿವಾಸಿ ಕನ್ನಡಿಗರಿಂದ ಹೆಚ್ಚಿನ ಹೂಡಿಕೆಯ ನಿರೀಕ್ಷೆ ಇದೆ, ಹೂಡಿಕೆಯನ್ನು ಹೆಚ್ಚಿಸುವುದಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಲು ಸರ್ಕಾರ ಉದ್ದೇಶಿದೆ ಎಂದು ಹೇಳಿದ್ದಾರೆ.
ಹೂಡಿಕೆ ಕ್ರೋಢಿಕರಣ ವಿಷಯ, ಆಸ್ತಿ ಖರೀದಿ ಮತ್ತು ಮಾರಾಟ, ದೂರು ದಾಖಲಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಲಹಾ ಸೇವೆಗಳನ್ನು ಪ್ರಾರಂಭಿಸುವುದು ಸರ್ಕಾರದ ನಿಯಮಾವಳಿಗಳಲ್ಲಿ ಸೇರಿದ್ದು, ಎನ್ಆರ್ ಐ ವೇದಿಕೆಯ ಭಾಗವಾಗಿ ಕಾರ್ಯನಿರ್ವಹಿಸಲಿದೆ.
ಇನ್ನು ರಾಜ್ಯ ಸರ್ಕಾರ ಅನಿವಾಸಿ ಕನ್ನಡಿಗರ ಸಂಪರ್ಕ ಬೆಸೆಯುವುದಕ್ಕೂ ಕ್ರಮ ಕೈಗೊಂಡಿದ್ದು, ಇ-ಡೈರೆಕ್ಟರಿ ಜಾಗತಿಕವಾಗಿ ಕನ್ನಡಿಗರನ್ನು ಬೆಸೆಯಲು ಸಹಕಾರಿಯಾಗಲಿದೆ. ಅನಿವಾಸಿ ಕನ್ನಡಿಗ ಕಾರ್ಡ್ ಪಡೆಯುವವರಿಗೆ ಹೊಟೇಲ್, ಚಿನ್ನಾಭರಣ ಮಳಿಗೆ, ಆಸ್ಪತ್ರೆಗಳಲ್ಲಿ ರಿಯಾಯಿತಿ ಸರ್ಕಾರಿ ಕಚೇರಿಗಳಲ್ಲಿ ತ್ವರಿತ ಸೇವೆಯೂ ಲಭ್ಯವಿರಲಿದೆ.
ಬೆಂಗಳೂರು ಹೊರವಲಯದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಶನಿವಾರ ಚಾಲನೆ ಸಿಕ್ಕಿದ್ದು, ಜ.8 ರಂದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.