ತುಮಕೂರು: ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ತುಮಕೂರು ಗ್ರಾಮೀಣ ಠಾಣೆಯ ಎಎಸ್ಐ ಉಮೇಶ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರಕರಣ ಕುರಿತಂತೆ ವರದಿ ನೀಡಲು ಪೊಲೀಸರಿಗೆ ತಿಳಿಸಿದ್ದು ಸದ್ಯ ಆರೋಪಿ ಎಎಸ್ಐ ಉಮೇಶ್ ರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಕಳೆದ ಶನಿವಾರ ತುಮಕೂರು ಜಿಲ್ಲೆಯ ಅಂತರಸನಹಳ್ಳಿ ಬಳಿ ರಾತ್ರಿ ಗಸ್ತು ಉಮೇಶ್ ತಮ್ಮ ಪರಿಚಯಸ್ತನಿಗೆ ಕರೆ ಮಾಡಿ ಬೊಲೆರೋ ವಾಹನವನ್ನು ತರಿಸಿಕೊಂಡು ಮಾನಸಿಕ ಅಸ್ವಸ್ಥೆಯನ್ನು ಹತ್ತಿಸಿಕೊಂಡು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು. ಬಳಿಕ ಆಕೆಯನ್ನು ಮನೆಗೆ ಬಿಟ್ಟು ಬಂದಿದ್ದರು.
ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಎಎಸ್ಐ ಉಮೇಶ್ ರನ್ನು ಬಂಧಿಸಿದ್ದ ಪೊಲೀಸರು ಬೊಲೆರೋ ವಾಹನವನ್ನು ವಶಕ್ಕೆ ಪಡೆದು ಕಾರು ಚಾಲಕ ಈಶ್ವರ್ ನನ್ನು ಬಂಧಿಸಿ ವಿಚಾರಣೆ ನಡೆಸಿದರು. ಬಳಿಕ ಎರಡನೇ ಹೆಚ್ಚುವರಿ ನ್ಯಾಯಾಲಯ ಹಾಗೂ ಜೆಎಂಎಫ್ ಹಿರಿಯ ಶ್ರೇಣಿ ನ್ಯಾಯಲಕ್ಕೆ ಹಾಜರುಪಡಿಸಿದ್ದು ನ್ಯಾಯಾಧೀಶ ವೇದಮೂರ್ತಿ ಅವರು ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ತುಮಕೂರು ಪೊಲೀಸ್ ಅಧೀಕ್ಷಕ ಇಶಾ ಪಂತ್ ಹೇಳಿದ್ದಾರೆ. ಇನ್ನು ಜಿಲ್ಲಾಧಿಕಾರಿ ಕೆಪಿ ಮೋಹನ್ ರಾಜ್ ಅವರು ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಮಹಿಳೆಯನ್ನು ಭೇಟಿ ಮಾಡಿ ಸ್ಥೈರ್ಯ ನಿಧಿಯಿಂದ 25 ಸಾವಿರ ಪರಿಹಾರ ನೀಡಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿಎಸ್ ಉಗ್ರಪ್ಪ ಅವರು ಸಂತ್ರಸ್ತ ಮಹಿಳೆಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದು ಸಂತ್ರಸ್ತೆಗೆ ನಿರ್ಭಯ ನಿಧಿಯಿಂದ 3 ಲಕ್ಷ ರುಪಾಯಿ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos