ಬೆಂಗಳೂರು: ದಂಪತಿ ಬೇರೆ ಬೇರೆ ಧರ್ಮಕ್ಕೆ ಸೇರಿದವರೆಂಬ ಕಾರಣದಿಂದಾಗಿ ನಗರ ಹೊಟೇಲ್ ವೊಂದು ಕೇರಳದ ಜೋಡಿಗೆ ಕೊಠಡಿ ನೀಡಲು ನಿರಾಕರಿಸಿರುವ ಘಟನೆ ನಡೆದಿದೆ.
ಸಾಮಾಜಿಕ ಕಾರ್ಯಕರ್ತ ಶಫೀಕ್ ಸುಬೈದಾ ಹಕ್ಕೀಂ, ಅವರ ಪತ್ನಿ ದಿವ್ಯಾ ಡಿ. ಬೆಂಗಳೂರಿಗೆ ಆಗಮಿಸಿದ್ದಾರೆ. ದಿವ್ಯಾ
ಪಿಎಚ್ ಡಿ ವಿದ್ಯಾರ್ಥಿನಿಯಾಗಿದ್ದು, ನಗರದಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಲಾ ಸ್ಕೂಲ್ ನ ಸಂದರ್ಶನಕ್ಕಾಗಿ ಆಗಮಿಸಿದ್ದಾರೆ.
ಶಾಂತಿನಗರದಲ್ಲಿರುವ ಒಲೈವ್ ರೆಸಿಡೆನ್ಸಿಯಲ್ಲಿ ರೂಮ್ ವಿಚಾರಿಸಿದ್ದಾರೆ. ಹೊಟೇಲ್ ರಿಸೆಪ್ಷನಿಸ್ಟ್ ಶಫೀಕ್ ಮತ್ತು ಅವರ ಪತ್ನಿಯ ಐಡಿ ಪ್ರೂಫ್ ಕೇಳಿದ್ದಾರೆ. ಅದರಲ್ಲಿ ಹಿಂದೂ-ಮುಸ್ಲೀಂ ಹೆಸರಿರುವುದನ್ನು ನೋಡಿ ನಿಮ್ಮಿಬ್ಬರಿಗೂ ಒಂದೇ ರೂಮ್ ಕೊಡಲಾಗುವುದಿಲ್ಲ ಎಂದಿದ್ದಾರೆ.
ಇವರು ಯಾಕೆ ಎಂದು ಪ್ರಶ್ನಿಸಿದಾಗ ಇದು ನಮ್ಮ ಹೊಟೇಲಿನ ನಿಯಮ ಎಂದು ಕಡೆಗೂ ಕೊಡಲು ಒಪ್ಪಲಿಲ್ಲ. ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಹುಡುಗಿಯ ಜೊತೆ ಬಂದಿದ್ದಾನೆ ಎನ್ನುವುದೇ ದೊಡ್ಡ ವಿಚಾರವಾಗಿದೆ ಎಂದು ಶಫೀಕ್ ಹೇಳಿದ್ದಾರೆ.
ಅವರಿಬ್ಬರೂ ಯಾವುದೇ ಲಗ್ಗೇಜ್ ತಂದಿರಲಿಲ್ಲ, ಜೊತೆಗೆ ನೋಡಲು ಅವರ ದಂಪತಿಯಂತೆ ಕಾಣುತ್ತಿರಲಿಲ್ಲ, ಹೀಗೆ ಹಲವರು ಕೊಠಡಿ ಬುಕ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ನಿದರ್ಶನಗಳಿವೆ, ಅವರ ಐಡಿ ಕಾರ್ಡ್ ನಲ್ಲಿ ಬೇರೆ ಬೇರೆ ಹೆಸರುಗಳಿತ್ತು, ಹೀಗಾಗಿ ನಾವು ಆತಂಕಗೊಂಡು ಕೊಠಡಿ ನೀಡಲು ನಿರಾಕರಿಸಿದೆವು ಎಂದು ಹೋಟೆಲ್ ಕ್ಯಾಶಿಯರ್ ಸ್ಪಷ್ಟ ಪಡಿಸಿದ್ದಾರೆ.