ಬೆಂಗಳೂರು: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಿಶಿಕಲಾ ನಟರಾಜನ್ ಇರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಾರಣಕ್ಕೆ ಬಂಧಿಖಾನೆ ಡಿಐಜಿ ಡಿ. ರೂಪಾ ಅವರಿಗೆ ರಾಜ್ಯ ಸರ್ಕಾರ ಶುಕ್ರಾವಾರ ನೊಟೀಸ್ ಜಾರಿ ಮಾಡಿದೆ.
ಡಿ ರೂಪಾ ಅವರ ಹೇಳಿಕೆಗೆ ಸಂಬಂಧಿಸಿದಂತೆ ಇಂದು ಮೈಸೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಹಿರಿಯ ಅಧಿಕಾರಿಗೆ ವರದಿ ನೀಡಬೇಕೆ ವಿನಃ ಪದೇ ಪದೇ ಮಾಧ್ಯಮಗಳಿಗೆ ಹೇಳಿಕೆ ನೀಡುವುದು ಕಾನೂನು ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ ಡಿಐಜಿ ರೂಪಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರಿಂದ ತನಿಖೆ ನಡೆಸಲಾಗುವುದು. ರೂಪಾ ಆರೋಪದ ಬಗ್ಗೆ ಒಂದು ವಾರದಲ್ಲಿ ಮಧ್ಯಂತರ ವರದಿ ನೀಡುವಂತೆ ಹಾಗೂ ಒಂದು ತಿಂಗಳಲ್ಲಿ ಅಂತಿಮ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾಗೆ ವಿಶೇಷ ಆತಿಥ್ಯ ನೀಡಲು ಕಾರಾಗೃಹ ಡಿಜಿಪಿ ಸತ್ಯನಾರಾಯಣ 2 ಕೋಟಿ ರು. ಲಂಚ ಪಡೆದಿದ್ದಾರೆ. ಛಾಪಾ ಕಾಗದ ಆರೋಪಿ ತೆಲಗಿಗೆ ಕಾರಾಗೃಹ ನಿಯಮ ಉಲ್ಲಂಘಿಸಿ ಆತಿಥ್ಯ ನೀಡಲಾಗುತ್ತಿದೆ ಎಂದು ರೂಪಾ ಆರೋಪಿಸಿದ್ದಾರೆ.
ಕಾರಾಗೃಹ ಡಿಜಿಪಿ ಸತ್ಯನಾರಾಯಣರಾವ್ ವಿರುದ್ಧ ಡಿಐಜಿ ರೂಪಾ ಮಾಡಿರುವ ಆರೋಪ ಪೊಲೀಸ್ ಇಲಾಖೆಯಷ್ಟೇ ಅಲ್ಲದೆ ಸರ್ಕಾರದ ಮಟ್ಟದಲ್ಲೂ ತೀವ್ರ ಸಂಚಲನ ಮೂಡಿಸಿದೆ.