ಬೆಂಗಳೂರು: ಪ್ರತಿನಿತ್ಯ ತೈಲ ಬೆಲೆ ಪರಿಷ್ಕರಣೆ ಮಾಡುವ ತೈಲ ಮಾರುಕಟ್ಟೆ ಸಂಸ್ಥೆಗಳ ನಿರ್ಧಾರವನ್ನು ವಿರೋಧಿಸಿ ಪೆಟ್ರೋಲ್ ಬಂಕ್ ಗಳ ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಂಗಳೂರು ನಗರ ಪ್ರದೇಶದಲ್ಲಿ ಪೆಟ್ರೋಲ್ ಬಂಕ್ ಗಳು "ನೋ ಪರ್ಚೇಸ್" ನೀತಿಯನ್ನು ಅನುಸರಿಸುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಮೈಸೂರು, ಚಾಮರಾಜ ನಗರ, ರಾಮನಗರ, ಮಂಡ್ಯ, ಹಾಸನ, ಕೊಡಗು ದಾವಣಗೆರೆ, ಶಿವಮೊಗ್ಗ, ಮಂಗಳೂರು, ಕೋಲಾರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪೆಟ್ರೋಲ್ ಬಂಕ್ ಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುತ್ತಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಗಳು ಕಂಪನಿಗಳಿಂದ ತೈಲ ಖರೀದಿಸುತ್ತಿಲ್ಲವಾದರೂ ಇರುವುದನ್ನು ಗ್ರಾಹಕರಿಗೆ ಮಾರಾಟ ಮಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.
ಪ್ರತಿ ನಿತ್ಯ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡುವ ನೀತಿಯನ್ನು ರಾಜ್ಯ ಪೆಟ್ರೋಲಿಯಂ ಡೀಲರ್ ಗಳ ಒಕ್ಕೂಟದ ಅಧ್ಯಕ್ಷ ಬಿಆರ್ ರವೀಂದ್ರನಾಥ್ ವಿರೋಧಿಸಿದ್ದಾರೆ.
ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಿಸುವ ಭಾರತೀಯ ತೈಲ ನಿಗಮದ ಕ್ರಮ ಅವೈಜ್ಞಾನಿಕವಾಗಿದೆ. ಈ ಕ್ರಮದಿಂದ ಬಂಕ್ ಮಾಲೀಕರು ಸಂಕಷ್ಟ ಎದುರಿಸಬೇಕಾಗುತ್ತದೆ. ಗ್ರಾಮೀಣ ಭಾಗದ ಪೆಟ್ರೋಲ್ ಬಂಕ್ ಮಾಲೀಕರಿಗೆ ಇದರಿಂದ ಹೆಚ್ಚು ಸಮಸ್ಯೆಯಾಗುತ್ತದೆ, ಪ್ರತಿ ದಿನ ದರ ಪರಿಷ್ಕರಿಸುವಾಗ ಏರುಪೇರಾದರೆ ಬಂಕ್ ಮಾಲೀಕರಿಗೆ 5 ಲಕ್ಷ ದಂಡ ಹಾಗೂ 60 ದಿನ ತೈಲ ಮಾರಾಟಕ್ಕೆ ನಿಷೇಧ, ಎರಡನೇ ಬಾರಿಗೆ ತಪ್ಪು ಪುನರಾವರ್ತನೆಯಾದರೆ ಪರವಾನಗಿಯನ್ನೇ ರದ್ದು ಮಾಡುವುದಾಗಿ ತಿಳಿಸಲಾಗಿದೆ. ಇದು ಯಾವ ಸೀಮೆಯ ಕಾನೂನು ಎಂದು ರವೀಂದ್ರನಾಥ್ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics