ರಾಜ್ಯ

ಉದ್ಯೋಗ ಕಳೆದುಕೊಂಡ ಐಟಿ ಉದ್ಯೋಗಿಗಳಿಗೆ ಕಾನೂನು ನೆರವು: ಸಚಿವ ಪ್ರಿಯಾಂಕ್ ಖರ್ಗೆ

Sumana Upadhyaya
ಬೆಂಗಳೂರು: ಅನೇಕ ಐಟಿ ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುತ್ತಿದ್ದಂತೆ ಐಟಿ ವಲಯದಲ್ಲಿ ಒಂದು ರೀತಿಯ ಗಾಬರಿ ಉಂಟಾಗಿದೆ. ಹೀಗೆ ಉದ್ಯೋಗ ಕಳೆದುಕೊಂಡ ಐಟಿ ವೃತ್ತಿಪರರಿಗೆ ಕಾನೂನು ನೆರವು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. 
ಈ ವಿಷಯವನ್ನು ನಿನ್ನೆ ವಿಧಾನ ಪರಿಷತ್ತಿನಲ್ಲಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಐಟಿ ಉದ್ಯಮದಲ್ಲಿನ ಅಂದಾಜು ವ್ಯವಸ್ಥೆ  ಪಾರದರ್ಶಕವಾಗಿಲ್ಲ ಎಂದು ಐಟಿ ಉದ್ಯೋಗಿಗಳ ವೇದಿಕೆ ಆರೋಪಿಸಿದೆ. ಉದ್ಯೋಗಿಗಳ ಸಮಸ್ಯೆ ಬಗ್ಗೆ ಅರಿವಿದ್ದು ಅವರಿಗೆ ಕಾನಾನು ನೆರವು ನೀಡಲಿದ್ದೇವೆ. ಐಟಿ ಉದ್ಯೋಗಿಗಳ ವೇದಿಕೆ ಎತ್ತಿದ ಸಮಸ್ಯೆಗಳ ಕುರಿತು ನಾವು ಕಾರ್ಪೊರೇಟ್ ಕಂಪೆನಿಗಳ ಜೊತೆ ಮಾತನಾಡಿದ್ದೇವೆ. ಕಂಪೆನಿಗಳು ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ಬಿಜೆಪಿ ಸದಸ್ಯೆ ತಾರಾ ಅವರ ಪ್ರಶ್ನೆಗೆ ಉತ್ತರಿಸಿದರು.
ಕೆಲ ದಿನಗಳ ಹಿಂದೆ ಐಟಿ ಉದ್ಯೋಗಿಗಳ ವೇದಿಕೆ ಸದಸ್ಯರು(ಎಫ್ಐಟಿಇ) ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಭೇಟಿ ಮಾಡಿ, ಐಟಿ ಕಂಪೆನಿಗಳನ್ನು ಕೈಗಾರಿಕಾ ಉದ್ಯೋಗ(ಸ್ಥಾಯಿ ಆದೇಶ) ಕಾಯ್ದೆಯಡಿ ಸೇರಿಸಬೇಕೆಂದು ಒತ್ತಾಯಿಸಿದ್ದರು. ಎಫ್ಐಟಿಇ ಸದಸ್ಯರ ಪ್ರಕಾರ, ಅನಿಯಂತ್ರಿತವಾಗಿ ಕೆಲಸದಿಂದ ತೆಗೆದುಹಾಕುವುದು, ಅಧಿಕ ಕೆಲಸದ ಅವಧಿ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಇತ್ಯಾದಿಗಳಿಗೆ ಸರ್ಕಾರ ಮತ್ತು ಕಾನೂನಿನಲ್ಲಿ ನೆರವು ಸಿಗುವುದಿಲ್ಲ.
ಐಟಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಮುಖ್ಯ ಕಾರಣ, ಅಮೆರಿಕಾ, ಸಿಂಗಾಪುರ ಮತ್ತು ಆಸ್ಟ್ರೇಲಿಯಾ ಇತ್ಯಾದಿ ದೇಶಗಳಿಂದ ವೀಸಾಕ್ಕೆ ಹೇರಿರುವ ನಿಷೇಧ. ಆ ದೇಶಗಳು ಸ್ಥಳೀಯರಿಗೆ ಆದ್ಯತೆ ನೀಡುವುದರಿಂದ ಭಾರತದ ಐಟಿ ಉದ್ಯೋಗಿಗಳಿಗೆ ಕುತ್ತು ಉಂಟಾಗಿದೆ. ಅಲ್ಲದೆ ಇಡೀ ಐಟಿ ಉದ್ಯಮಕ್ಕೆ ಹೊಡೆತ ಬಿದ್ದಿದೆ. ತಂತ್ರಜ್ಞಾನದಲ್ಲಿ ಬದಲಾವಣೆ ಮತ್ತೊಂದು ಕಾರಣ. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಹೆಚ್ಚಿನ ತರಬೇತಿಯ ಅವಶ್ಯಕತೆಯಿದೆ. ಆದರೆ ಇದು ಒಂದು ಹಗಲು-ರಾತ್ರಿಯಿಂದಾಗುವ ಕೆಲಸವಲ್ಲ. ಅದನ್ನು ನಿಧಾನವಾಗಿ ಹಂತಹಂತವಾಗಿ ಮಾಡಬೇಕಾಗುತ್ತದೆ. ಹೆಚ್ಚಿನ ಕೌಶಲ್ಯದ ಅಗತ್ಯ ಉದ್ಯೋಗಿಗಳಿಗಿದೆ ಎಂದು ಐಟಿ ಉದ್ಯೋಗಿಗಳ ವೇದಿಕೆ ಸದಸ್ಯರು ಹೇಳಿದ್ದಾರೆ.
SCROLL FOR NEXT