ಬೆಂಗಳೂರು: ಲಂಡನ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿದ್ದಕ್ಕಾಗಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದ್ದ ಕೊಡಗು ಜಿಲ್ಲೆಯ ಮೂವರು ಮುಸ್ಲಿಂ ಯುವಕರು ಈಗ ಜೈಲು ಪಾಲಾಗಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆತಂದ ಆರೋಪದ ಮೇಲೆ ಕಳೆದ ಸೋಮವಾರ ಬಂಧನಕ್ಕೊಳಗಾಗಿರುವ ಮೂವರು ಯುವಕರ ವಿರುದ್ದ ಜಾಮೀನು ರಹಿತ ಪ್ರಕರಣದಡಿ ಕೇಸ್ ದಾಖಲಿಸಿರುವುದರಿಂದ ಅವರಿಗೆ ಜಾಮೀನು ಸಿಗಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸುತ್ತಿದ್ದಂತೆ ಕುಶಾಲನಗರ ಹೆದ್ದಾರಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಝಹೀರ್, ರಿಯಾಜ್, ಅಬ್ದುಲ್ ಸಮ್ಮದ್ ಹಾಗೂ ಮುನೀರ್ ವಿರುದ್ಧ ಬಿಜೆಪಿ ಕಾರ್ಯಕರ್ತರು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಮೂವರನ್ನು ಬಂಧಿಸಲಾಗಿದೆ. ಆದರೆ ಮುನೀರ್ ತಪ್ಪಿಸಿಕೊಂಡಿದ್ದಾನೆ ಎಂದು ಕೊಡಗು ಹಿರಿಯ ಪೊಲೀಸ್ ಅಧಿಕಾರಿ ರಾಜೇಂದ್ರ ಪ್ರಸಾದ್ ಅವರು ಹೇಳಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ನಲ್ಲಿ ಪಾಕಿಸ್ತಾನ ತಂಡ ಗೆಲುವು ಸಾಧಿಸಿದ ಬೆನ್ನಲ್ಲೇ ಕಾಶ್ಮೀರದಲ್ಲಿ ನಡೆದ ಸಂಭ್ರಮಾಚರಣೆ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅಂತುಹುದೇ ಪ್ರಕರಣಗಳು ಕರ್ನಾಕದಲ್ಲೂ ಬೆಳಕಿಗೆ ಬಂದಿವೆ.