ಬೆಂಗಳೂರು: ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಹುದ್ದೆಗಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ನಾನು ಹರಕೆಯ ಕುರಿಯಲ್ಲ. ರಾಷ್ಟ್ರಪತಿ ಹುದ್ದೆಗೇರಲು ನನಗೆ ಸಂಖ್ಯಾಬಲ ಇಲ್ಲದಿರಬಹುದು. ಆದರೆ ಆತ್ಮಸಾಕ್ಷಿಯ ಮತಗಳು ಬಿದ್ದರೆ ನಿಶ್ಚಿತವಾಗಿ ನಾನು ಗೆಲ್ಲುತ್ತೇನೆ ಎಂದು ಯುಪಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್ ಅವರು ಶನಿವಾರ ಹೇಳಿದ್ದಾರೆ.
ಕಾಂಗ್ರೆಸ್ ಮೀರಾ ಕುಮಾರ್ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಿದೆ ಎಂಬ ಕೇಂದ್ರ ಸಚಿವ ರಾಮದಾಸ್ ಅಥವಾಲೆ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಯುಪಿಎ ರಾಷ್ಟ್ರಪತಿ ಅಭ್ಯರ್ಥಿ, ನಾನು ಹರೆಕೆಯ ಕುರಿಯಲ್ಲ. ಒಳ್ಳೆಯ ತತ್ವ ಸಿದ್ಧಾಂತ ಹಾಗೂ ಮೌಲ್ಯಗಳಿಗಾಗಿ ಈ ದೇಶದಲ್ಲಿ ಯಾರು ಬೇಕಾದರೂ ಹೋರಾಟ ನಡೆಸಬಹುದು. ಸಂಖ್ಯೆ ಮುಖ್ಯವಲ್ಲ ಮತ್ತು ಇದು ದಲಿತರಿಬ್ಬರ ಚುನಾವಣೆಯೂ ಅಲ್ಲ ಎಂದಿದ್ದಾರೆ.
ಇಂದು ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಶಾಸಕಾಂಗ ಸಭೆಯಲ್ಲಿ ಅವರು ಮತಯಾಚಿಸಿದರು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಿಎಂ ಸಿದ್ದರಾಮಯ್ಯ, ಎಐಸಿಸಿ ಕಾರ್ಯದರ್ಶಿಗಳು ಸೇರಿದಂತೆ ಹಲವಾರು ಮುಖಂಡರು ಸಂಸದರು, ಶಾಸಕರು ಭಾಗವಹಿಸಿದ್ದರು.
ನಂತರ ಮಾತನಾಡಿದ ಮೀರಾ ಕುಮಾರ್,17 ಪಕ್ಷಗಳು ಸರ್ವ ಸಮ್ಮತವಾಗಿ ಸಾಂವಿಧಾನಿಕ ಅತ್ಯುನ್ನತ ಹುದ್ದೆಗೆ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿವೆ. ಇದು ಮೌಲ್ಯ, ತತ್ವ ಸಿದ್ಧಾಂತ ಆಧಾರದ ಮೇಲೆ ನಡೆಯುವ ಚುನಾವಣೆ ಎಂದು ಹೇಳಿದ್ದಾರೆ.
ಎಲ್ಲಿ ಹೋದರೂ ನಿಮಗೆ ಗೆಲುವಿಗೆ ಅಗತ್ಯವಾಗಿರುವ ಮತಗಳು ಇಲ್ಲವಲ್ಲ ಎಂದು ಕೇಳುತ್ತಿದ್ದಾರೆ. ಮತ ಗಳಿಕೆಗೆ ಮೊದಲೇ ಫಲಿತಾಂಶ ನಿರ್ಧಾರವಾಗುವಂತಿದ್ದರೆ, ಚುನಾವಣೆ ಏಕೆ ಬೇಕು. ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯಬೇಕೇನು? ನಾನು ಹೋರಾಟಗಾರ್ತಿ, ಆದರ್ಶ ತತ್ವ ಸಿದ್ಧಾಂತಗಳೇ ನನ್ನ ಆಸ್ತಿ. ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿ ಎಂದು ದೇಶದ ಎಲ್ಲಾ ಜನಪ್ರತಿನಿಧಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಗೆಲ್ಲುವ ವಿಶ್ವಾಸವಿದೆ ಎಂದರು.
ನಾನು ಮತ್ತು ರಾಮನಾಥ್ ಕೋವಿಂದ್ ಸ್ಪರ್ಧಿಸುತ್ತಿದ್ದಂತೆ ಜಾತಿ ಬಣ್ಣ ನೀಡುತ್ತಿರುವುದು ದುರದೃಷ್ಟಕರ. ಈ ಚುನಾವಣೆಯನ್ನು ದೇಶದ ಹಿತದೃಷ್ಟಿಯಿಂದ ನೋಡಬೇಕು. ಇದು ದಲಿತರ ಚುನಾವಣೆಯಲ್ಲ ಎಂದು ಮಾಜಿ ಸ್ಪೀಕರ್ ಮೀರಾ ಕುಮಾರ್ ಸ್ಪಷ್ಟಪಡಿಸಿದರು.
ಸಾಮಾಜಿಕ ನ್ಯಾಯ ನನ್ನ ಪ್ರಮುಖ ಸಿದ್ಧಾಂತ. ಜಾತಿ ಹಾಗೂ ಬಡತನ ನಿರ್ಮೂಲನೆಗೆ ಹಲವಾರು ದಶಕಗಳ ಕಾಲ ಹೋರಾಟ ನಡೆಸಿದ್ದೇನೆ. ಗುಜರಾತ್, ಮಹಾರಾಷ್ಟ್ರ ರಾಜ್ಯಗಳ ಪ್ರಚಾರ ಮುಗಿಸಿದ್ದೇನೆ. ಇಂದು ತಮಿಳುನಾಡು, ನಂತರ ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಓಡಿಶಾ, ಕೋಲ್ಕತ್ತಾಗೆ ಹೋಗಿ ಮತಯಾಚಿಸುತ್ತೇನೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos