ಮೈಸೂರು: ಕಟಾವು ಮಾಡುವ ಹಂತಕ್ಕೆ ಬಂದಿದ್ದ ಬೆಳೆಯನ್ನು ಕಾಡಾನೆಗಳು ದಾಳಿ ಮಾಡಿ ನಾಶಪಡಿಸಿದ್ದಕ್ಕೆ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಬರಗಿ ಗ್ರಾಮದ ನಾಗೇಶ್ ಅಲಿಯಾಸ್ ಬೊಗಪ್ಪ (24) ಮೃತ ರೈತನಾಗಿದ್ದು, ಅರಣ್ಯ ಪ್ರದೇಶದ ಹತ್ತಿರದಲ್ಲೇ ಜಮೀನು ಹೊಂದಿದ್ದಾರೆ. ಇದು ಎರಡನೇ ಬಾರಿಗೆ ಕಾಡಾನೆ ದಾಳಿಯಿಂದ ಬೆಳೆ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 6 ತಿಂಗಳ ಹಿಂದೆ ಕಾಡಾನೆ ಹಿಂಡು ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿತ್ತು. ಈ ಬಾರಿಯೂ ಬಾಳೆಹಣ್ಣು ಬೆಳೆ ಕಾಡಾನೆ ದಾಳಿಗೆ ಸಂಪೂರ್ಣ ನಾಶವಾಗಿದೆ.
ಕಳೆದ ಬಾರಿ ಆನೆ ದಾಳಿ ನಡೆದಾಗ ಪರಿಹಾರ ಸಿಕ್ಕಿತ್ತಾದರೂ ನಷ್ಟದ ಹೊರೆಯನ್ನು ಭರಿಸಲು ನೆರವಾಗುವ ಮಟ್ಟಿಗೆ ನಾಗೇಶ್ ಅವರಿಗೆ ಪರಿಹಾರ ಸಿಕ್ಕಿರಲಿಲ್ಲ. ಈಗ ಮತ್ತೊಮ್ಮೆ ಬೆಳೆಗೆ ಹಾನಿ ಉಂಟಾಗಿರುವುದರಿಂದ 3 ಲಕ್ಷ ರೂಪಾಯಿ ಸಾಲ ತೀರಿಸಲು ದಿಕ್ಕು ಕಾಣದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಡಾನೆ ದಾಳಿಯ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೃತ ರೈತನ ಕುಟುಂಬ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.