ರಾಜ್ಯ

ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಭಾರೀ ಭದ್ರತೆ

Sumana Upadhyaya
ಬೆಂಗಳೂರು: ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಇಂದು ಬೆಳಗ್ಗೆ 10.15ಕ್ಕೆ ಆರಂಭವಾಗಲಿದೆ. ಇಂದಿನಿಂದ ಮಾರ್ಚ್ 27ರವರೆಗೆ ಪರೀಕ್ಷೆ ನಡೆಯಲಿದ್ದು, ಇಂದು ಜೀವಶಾಸ್ತ್ರ ಹಾಗೂ ಇತಿಹಾಸ ವಿಷಯದ ಪರೀಕ್ಷೆಗಳು ನಡೆಯಲಿವೆ.
ಈ ವರ್ಷ 6 ಲಕ್ಷದ 84 ಸಾವಿರದ 490 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇವರಲ್ಲಿ 3 ಲಕ್ಷದ 48 ಸಾವಿರದ 562 ವಿದ್ಯಾರ್ಥಿಗಳು ಹಾಗೂ 3 ಲಕ್ಷದ 35 ಸಾವಿರದ 909 ವಿದ್ಯಾರ್ಥಿನಿಯರು ಒಳಗೊಂಡಿದ್ದಾರೆ. 19 ಜನ ತೃತೀಯ ಲಿಂಗಿಗಳು ಪರೀಕ್ಷೆ ಬರೆಯುತ್ತಿರುವುದು ಈ ಬಾರಿಯ ವಿಶೇಷ. ರಾಜ್ಯಾದ್ಯಂತ 998 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ 1.30 ವರೆಗೆ ಪರೀಕ್ಷೆಗಳು ನಡೆಯಲಿವೆ.
ಕಳೆದ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆಯಿಂದ ಎಚ್ಚೆತ್ತಿರುವ ಪದವಿ ಪೂರ್ವ ಶಿಕ್ಷಣ ಮಂಡಳಿ ಈ ವರ್ಷ ಅಂತಹ ಘಟನೆ ಪುನರಾವರ್ತೆನೆಯಾಗದಂತೆ ಪ್ರಶ್ನೆ ಪತ್ರಿಕೆಗಳ ಮುದ್ರಣದಿಂದ ಹಿಡಿದು ಹಂಚಿಕೆಯವರೆಗೂ ತೀವ್ರ ನಿಗಾ ವಹಿಸಿತ್ತು. ಕರ್ನಾಟಕ ಸುರಕ್ಷತಾ ಪರೀಕ್ಷಾ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಜಿಲ್ಲಾ ಖಜಾನೆಗಳಿಗೆ ಸಿಸಿಟಿವಿ, ಮ್ಯಾಗ್ನೆಟಿಕ್ ಡೋರ್‍ಗಳು, ಬಯೋ ಮೆಟ್ರಿಕ್ ಪದ್ಧತಿ ಸೇರಿದಂತೆ ಇನ್ನಿತರ ಅತಿ ಉನ್ನತ ಮಟ್ಟದ ಭದ್ರತೆ ಅಳವಡಿಸಲಾಗಿದೆ.
ಸಹಾಯವಾಣಿ: ವಿದ್ಯಾರ್ಥಿಗಳು,  ಪೋಷಕರು ಮತ್ತು ಸಾರ್ವಜನಿಕರಿಗೆ ಪರೀಕ್ಷೆ ಕುರಿತು ಮೂಡುವ ಗೊಂದಲಗಳನ್ನು ಬಗೆಹರಿಸುವುದಕ್ಕಾಗಿ ಸಹಾಯವಾಣಿ ಆರಂಭಿಸಲಾಗಿದೆ. ಕೇಂದ್ರ ಕಚೇರಿ ಮತ್ತು ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳಲ್ಲಿ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಸಮಸ್ಯೆಗಳಿದ್ದರೆ 08023083900 ದೂರವಾಣಿ ಸಂಖ್ಯೆಗೆ ಕರೆಮಾಡಬಹುದು.
SCROLL FOR NEXT