ಸುರಂಗ ವೆಂಟಿಲೇಟರ್ ವ್ಯವಸ್ಥೆ ಪ್ರಯಾಣಿಕರ ಸುರಕ್ಷತೆಗೆ ತುರ್ತು ಸಂದರ್ಭದಲ್ಲಿ ಯಾವ ರೀತಿ ಕೆಲಸ ಮಾಡುತ್ತದೆ ಎಂದು ಮೆಟ್ರೊ ಅಧಿಕಾರಿಗಳು ತೋರಿಸಿಕೊಟ್ಟರು.
ಬೆಂಗಳೂರು: ಏಪ್ರಿಲ್ ಕೊನೆಯ ವಾರದಲ್ಲಿ ಮೆಟ್ರೊ ಮೊದಲ ಹಂತದ ಕಾಮಗಾರಿ ಮುಗಿಯುವ ಬಗ್ಗೆ ಊಹಾಪೋಹಗಳು ಎದ್ದಿರುವ ಹಿನ್ನೆಲೆಯಲ್ಲಿ ಇದಕ್ಕೆ ಸ್ಪಷ್ಟನೆ ನೀಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ ಜೆ ಜಾರ್ಜ್, ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿ ಮೆಟ್ರೊ ರೈಲು ಸಂಚಾರ ಆರಂಭಕ್ಕೆ ಏಪ್ರಿಲ್ 15ರಂದು ಮುಖ್ಯಮಂತ್ರಿ ಗಡುವು ನಿಗದಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕೆಂಪೇಗೌಡ ಮೆಟ್ರೊ ಸ್ಟೇಷನ್ ಮತ್ತು ಮಂತ್ರಿ ಸ್ಕ್ವೇರ್ ನಡುವೆ ಸುರಂಗ ಕಾಮಗಾರಿಯನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಟ್ರೊ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಪರಿಶೀಲನಾ ಸಭೆ ನಡೆಸಿದ್ದು ಏಪ್ರಿಲ್ 1 5ರ ಹೊತ್ತಿಗೆ ಕಾಮಗಾರಿ ಮುಗಿಸುವಂತೆ ಹೇಳಿದ್ದಾರೆ. ಸಂಪಿಗೆ ರಸ್ತೆಯಿಂದ ಯೆಲಚೇನಹಳ್ಳಿ ಮಧ್ಯೆ ಉತ್ತರ-ದಕ್ಷಿಣ ಕಾರಿಡಾರ್, ಸುರಂಗ ಕಾಮಗಾರಿ ಸಂಪೂರ್ಣವಾಗದಿರುವುದರಿಂದ ಆರಂಭಕ್ಕೆ ವಿಳಂಬವಾಗುತ್ತಿದೆ ಎಂದು ಹೇಳಿದರು.
ಮೆಟ್ರೊ ರೈಲು ನಿಗದಿತ ದಿನಾಂಕಕ್ಕೆ ಸರಿಯಾಗಿ ಸೇವೆ ಆರಂಭಿಸುತ್ತದೆಯೇ ಎಂದು ಕೇಳಿದ್ದಕ್ಕೆ,ಸುರಂಗ ಕಾರಿಡಾರ್ ಸಿದ್ದವಾಗಿದೆ. ಪರೀಕ್ಷೆ ಮತ್ತು ಪ್ರಾಯೋಗಿಕ ಸಂಚಾರ ಮುಗಿಸಿದ ನಂತರ ಕೇಂದ್ರದ ತಂಡವೊಂದು ಪ್ರಮಾಣ ಪತ್ರ ನೀಡಬೇಕು. ಅದರದಲ್ಲಿ ವಿಳಂಬವಾದರೆ ನಾವು ಏನು ಮಾಡಲೂ ಸಾಧ್ಯವಿಲ್ಲ ಎಂದರು.
ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೊಲಾ,ರಾಜಾಜಿನಗರದಿಂದ ಸಂಪಿಗೆ ರಸ್ತೆಗೆ ಮೆಟ್ರೊ ಸೇವೆ ಒಂದು ವಾರದವರೆಗೆ ಸ್ಥಗಿತಗೊಳ್ಳಲಿದೆ. ಕೆಂಪೇಗೌಡ ಮೆಟ್ರೊ ಸ್ಟೇಷನ್ ನಿಂದ ಸಂಪಿಗೆ ರಸ್ತೆ ನಡುವಿನ ಕಾಮಗಾರಿಯಿಂದ ಸಂಪರ್ಕಕ್ಕೆ ಅಡಚಣೆಯುಂಟಾಗಲಿದೆ. ನಾವು ಈ ಸಂದರ್ಭದಲ್ಲಿ ಜನರಿಗೆ ಬಸ್ ಸೇವೆ ಒದಗಿಸುತ್ತೇವೆ ಮತ್ತು ಕಾಮಗಾರಿಗಳನ್ನು ರಜಾದಿನಗಳಲ್ಲಿ ಹಾಗೂ ವಾರಾಂತ್ಯಗಳಲ್ಲಿ ಆದಷ್ಟು ಮಾಡಿಸುತ್ತೇವೆ. ಇದರಿಂದ ಬಹುಪಾಲು ಜನರು ತೊಂದರೆಗೀಡಾಗುವುದು ತಪ್ಪುತ್ತದೆ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos