ಬೆಂಗಳೂರು: ಮಹಾರಾಣಿ ಕಾಲೇಜಿನ ಹಾಸ್ಟೆಲ್ ಆವರಣಕ್ಕೆ ರಾತ್ರಿ ಹೊತ್ತಿನಲ್ಲಿ ಬೆತ್ತಲೆಯಾಗಿ ವ್ಯಕ್ತಿಯೊಬ್ಬ ಬರುವುದು ನಿನ್ನೆ ಸದನದಲ್ಲಿ ಪ್ರಸ್ತಾಪವಾಯಿತು.
ಕಾಲೇಜು ಮಾತ್ರವಲ್ಲ, ಸುಮಾರು 200 ವಿದ್ಯಾರ್ಥಿನಿಯರು ಉಳಿದುಕೊಳ್ಳುವ ಹಾಸ್ಟೆಲ್ ಕೂಡ ಸುರಕ್ಷಿತವಾಗಿಲ್ಲ. ಅಪರಿಚಿತ ವ್ಯಕ್ತಿಯೊಬ್ಬ ಹಾಸ್ಟೆಲ್ ನ ಆವರಣದಲ್ಲಿ ಆಗಾಗ ಬಂದು ಸುಳಿಯುವುದು, ಇಣುಕುವುದು ಮಾಡುತ್ತಿರುವುದು ವಿದ್ಯಾರ್ಥಿನಿಯರಲ್ಲಿ ಭೀತಿಯನ್ನು ಹುಟ್ಟಿಸಿದೆ. ನಿನ್ನೆ ನಗರದ ಮಹಾರಾಣಿ ಕಾಲೇಜಿನ ಹಾಸ್ಟೆಲ್ ನ ಸಿಸಿಟಿವಿ ಕ್ಯಾಮರಾದಲ್ಲಿ ಹಾಸ್ಟೆಲ್ ನ ಹಿಂದುಗಡೆ ವ್ಯಕ್ತಿಯೊಬ್ಬ ಓಡಾಡುತ್ತಿರುವುದು ಪತ್ತೆಯಾಗಿದೆ.ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಲೈಂಗಿಕ ಕಿರುಕುಳ ತಡೆ ತಜ್ಞರ ಸಮಿತಿ ಸದಸ್ಯರಿಗೆ ವಿಡಿಯೋ ತೋರಿಸಲಾಗಿದೆ.
ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ನಿನ್ನೆ ಸದನದಲ್ಲಿ ಮಾತನಾಡಿ ಸಿಸಿಟಿವಿಯಲ್ಲಿ ಬೆತ್ತಲೆ ವ್ಯಕ್ತಿಯೊಬ್ಬ ಹಾಸ್ಟೆಲ್ ಆವರಣದಲ್ಲಿ ರಾತ್ರಿ ವೇಳೆ ಓಡಾಡುತ್ತಾನೆ. ಈ ವಿಷಯವನ್ನು ನಾನು ಈಗಾಗಲೇ ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.
ವಿದ್ಯಾರ್ಥಿನಿಯರು ಈ ಹಿಂದೆ ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ ದೂರು ದಾಖಲಿಸಿಕೊಳ್ಳಲಿಲ್ಲವಂತೆ.
ಹಲವು ಸಂದರ್ಭಗಳಲ್ಲಿ ನಮ್ಮ ಬಟ್ಟೆಗಳು ಟೆರೇಸ್ ಮೇಲೆ ಒಣಗಲು ಹಾಕಿದ್ದು ಕಾಣೆಯಾಗಿವೆ. ರೇಸ್ ಕೋರ್ಸ್ ರಸ್ತೆ ಕಡೆಯಿಂದ ಯಾರು ಬೇಕಾದರೂ ನಮ್ಮ ಕ್ಯಾಂಪಸ್ ಪ್ರವೇಶಿಸಬಹುದು. ರಾತ್ರಿ 8 ಗಂಟೆ ಮೇಲೆ ಏನಾದರೂ ತುರ್ತು ಕೆಲಸಗಳಿಗೆ ಹೊರ ಹೋಗಬೇಕೆಂದರೂ ನಮಗೆ ಭೀತಿ ಉಂಟಾಗುತ್ತಿದೆ ಎಂದು ವಿದ್ಯಾರ್ಥಿನಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲೆ ಶಾಂತ ಕುಮಾರಿ ಅವರನ್ನು ಕೇಳಿದಾಗ, ಒಂದು ವರ್ಷದ ಹಿಂದೆ ಇಂತಹ ಘಟನೆ ನಡೆದಿತ್ತು. ಪೊಲೀಸರಿಗೆ ಸಾಕಷ್ಟು ಬಾರಿ ದೂರು ನೀಡಿದ್ದೆವು. ಆದರೆ ಅವರೇನು ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ.
ಈ ಘಟನೆಯಿಂದಾಗಿ ಕೆಲವು ವಿದ್ಯಾರ್ಥಿನಿಯರು ಹಾಸ್ಟೆಲ್ ತೊರೆದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos