ಟ್ವಿಟ್ಟರ್ ಚಿಹ್ನೆ, ಒಳಚಿತ್ರದಲ್ಲಿ ಕಾರ್ತಿಕ್ ಶ್ರೀನಿವಾಸನ್
ಬೆಂಗಳೂರು: ತಮ್ಮ ಆಯ್ಕೆಯನ್ನು ಹತ್ತಿಕ್ಕುವ ಖಾಸಗಿ ಬ್ಯಾಂಕ್ ವಿರುದ್ಧ ವ್ಯಕ್ತಿಯೊಬ್ಬರು ಆನ್ ಲೈನ್ ನಲ್ಲಿ ಸತ್ಯಾಗ್ರಹ ಆರಂಭಿಸಿದ್ದಾರೆ. ಬೆಂಗಳೂರು ಮೂಲದ ಡಿಜಿಟಲ್ ಮಾರ್ಕೆಟರ್ ಕಾರ್ತಿಕ್ ಶ್ರೀನಿವಾಸನ್ ಹೆಚ್ ಡಿಎಫ್ ಸಿ ಬ್ಯಾಂಕ್ ವಿರುದ್ಧ ದಿನಕ್ಕೊಂದು ಟ್ವೀಟ್ ಮಾಡುವ ಮೂಲಕ ಸತ್ಯಾಗ್ರಹ ಆರಂಭಿಸಿದ್ದಾರೆ.
ಅಷ್ಟಕ್ಕೂ ಇದರ ಹಿಂದಿನ ಅಸಲಿ ವಿಷಯ ಹೀಗಿದೆ: ಹೊಸ ವರ್ಚುವಲ್ ರಿಲೇಶನ್ ಷಿಪ್ ಪ್ರೋಗ್ರೇಂ ಬಗ್ಗೆ ಒಂದು ದಿನ ಕಾರ್ತಿಕ್ ಶ್ರೀನಿವಾಸನ್ ಗೆ ಇಮೇಲ್ ಬಂದಿತ್ತಂತೆ. ಅದರಲ್ಲಿ ಕಾರ್ತಿಕ್ ಗೆ ಭಾಗವಹಿಸಲು ಇಷ್ಟವಿದೆಯೇ, ಇಲ್ಲವೇ ಎಂದು ಕೇಳುವ ಬದಲು ಸ್ವಯಂಚಾಲಿತವಾಗಿ ಅವರನ್ನು ಸೇರಿಸಲಾಗಿತ್ತಂತೆ.
ನಿಮಗೆ ವರ್ಚುವಲ್ ಪ್ರೋಗ್ರೇಂನಲ್ಲಿ ಭಾಗವಹಿಸಲು ಇಚ್ಛಿಸುವುದಾದರೆ ಇಲ್ಲಿ ಕ್ಲಿಕ್ ಮಾಡಿ ಎಂದು ಇಮೇಲ್ ನಲ್ಲಿ ಆಯ್ಕೆಯೊಂದು ಬಂದಿತ್ತು. ಈ ಕಾರ್ಯಕ್ರಮದ ಉಚಿತ ಪ್ರಯೋಗವನ್ನು ಬ್ಯಾಂಕು ಸುಮಾರು ಒಂದು ವರ್ಷದವರೆಗೆ ನೀಡುತ್ತದೆ. ನಂತರ 400 ರೂಪಾಯಿ ಮತ್ತು ತೆರಿಗೆ ವಿಧಿಸುತ್ತದೆ.
ಮೂರು ಉಚಿತ ತರಬೇತಿ ಕಾರ್ಯಕ್ರಮಗಳು ಮುಗಿದ ನಂತರ ಗ್ರಾಹಕರಿಗೆ ಬ್ಯಾಂಕು ಶುಲ್ಕ ವಿಧಿಸುತ್ತದೆ. ಈ ಬಗ್ಗೆ ಕಾರ್ತಿಕ್ ಬ್ಯಾಂಕಿಗೆ ಇಮೇಲ್ ಮಾಡಿದರು. ಸುಮಾರು ಒಂದು ವಾರ ಸತತ ಟ್ವೀಟ್ ಮಾಡಿದರೂ ಅದಕ್ಕೆ ಉತ್ತರ ಸಿಗಲಿಲ್ಲ. ನಂತರ ಕಾರ್ತಿಕ್ ಫೆಬ್ರವರಿ 1ರಂದು ಪ್ರತಿದಿನ ಟ್ವೀಟ್ ಮಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಾ ಬಂದಿದ್ದಾರೆ.
ಕಾರ್ತಿಕ್ 1998ರಲ್ಲಿ ದೆಹಲಿಯಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕಿನಲ್ಲಿ ಖಾತೆ ತೆರೆದಿದ್ದರು. ಅವರ ವೇತನ ಖಾತೆ, ಪತ್ನಿ ಜತೆ ಜಂಟಿ ಖಾತೆ, ಕಾರು ಸಾಲ, ಗೃಹ ಸಾಲ ಎಲ್ಲವನ್ನೂ ಹೆಚ್ ಡಿಎಫ್ ಸಿಯಿಂದ ತೆಗೆದುಕೊಂಡಿದ್ದು, ಎರಡು ದಶಕಗಳಿಂದ ವ್ಯವಹಾರ ನಡೆಸುತ್ತಿದ್ದಾರೆ. ಈ ವರ್ಷಪೂರ್ತಿ ಬ್ಯಾಂಕಿಗೆ ಟ್ವೀಟ್ ಮಾಡುತ್ತಿರುತ್ತೇನೆ. ನಂತರವೂ ಕ್ರಮ ಕೈಗೊಳ್ಳದಿದ್ದರೆ ಬ್ಯಾಂಕಿನಲ್ಲಿರುವ ಖಾತೆ ಮುಚ್ಚುತ್ತೇನೆ ಎನ್ನುತ್ತಾರೆ.
ಸುಮಾರು 500 ಮಂದಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ. ಕಾರ್ತಿಕ್ ಅವರ ಟ್ವೀಟ್ ನಿಂದ ನಮಗೆ ಅಂತಹ ಕಾರ್ಯಕ್ರಮವಿದೆ, ಬ್ಯಾಂಕಿನವರು ಒಂದು ವರ್ಷದ ನಂತರ ದರ ವಿಧಿಸುತ್ತಾರೆ ಎಂಬುದು ಗೊತ್ತಾಗಿದೆ ಎನ್ನುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos