ಭಟ್ಕಳ: ವಾಟ್ಸ್'ಅಪ್ ನಲ್ಲಿ ಗ್ರೂಪ್ ಅಡ್ಮಿನ್ ಆಗಿದ್ದೀರಾ? ಹಾಗಿದ್ದರೆ ಇನ್ನು ಮಂದೆ ಹುಷಾರಾಗಿರಿ. ಗ್ರೂಪಿನಲ್ಲಿ ಬೇರೆ ಯಾರಾದರೂ ಅವಹೇಳನಕಾರಿ ಸಂದೇಶ ಅಥವಾ ಪೋಸ್ಟ್ ಕಳುಹಿಸಿದರೆ, ಇನ್ನು ಮುಂದೆ ಗ್ರೂಪ್ ಅಡ್ಮಿನ್ ಗಳು ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ.
ವಾಟ್ಸ್'ಅಪ್ ಗ್ರೂಪಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟವಾದ ಕಾರಣಕ್ಕೆ ಗ್ರೂಪ್ ಅಡ್ಮಿನ್ ನ್ನು ಪೊಲೀಸರು ಬಂಧನಕ್ಕೊಳಪಡಿಸಿರುವ ಮೊದಲ ಪ್ರಕರಣವೊಂದು ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ಬೈಲೂರಿನಲ್ಲಿ ನಡೆದಿದೆ.
ಮುರುಡೇಶ್ವರದ ಬೈಲೂರು ವ್ಯಾಪ್ತಿಯ ದೊಡ್ಡಬಲ್ಲೆ ನಿವಾಸಿಯಾಗಿರುವ ಕೃಷ್ಣ ಸಣ್ಣತಮ್ಮ ನಾಯ್ಕ (30) ಬಂಧಿತ ವ್ಯಕ್ತಿಯಾಗಿದ್ದಾರೆ. ಆಟೋ ಚಾಲಕನಾಗಿರುವ ಕೃಷ್ಣ ಅವರು ಡಿ ಬಲ್ಸ್ ಬಾಯ್ಡ್ ಎಂಬ ವಾಟ್ಸ್'ಅಪ್ ಗ್ರೂಪಿನ ಅಡ್ಮಿನ್ ಆಗಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ತಿರುಚಿ ಅಶ್ಲೀಲಗೊಳಿಸಿ ಅವಹೇಳನ ಮಾಡಿದ್ದ ಫೋಟೋವೊಂದು ಈ ಗ್ರೂಪಿನಲ್ಲಿ ಪ್ರಕಟವಾಗಿದೆ. ಈ ಹಿನ್ನಲೆಯಲ್ಲಿ ಆನಂದ ಮಂಜುನಾಥ ನಾಯ್ಕ ಎಂಬುವವರು ಮುರುಡೇಶ್ವರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಗಣೇಶ ನಾಯ್ಕ ಎಂಬಾತನನ್ನೂ ಪೊಲೀಸರು ಬಂಧಿಸಿದ್ದು, ಆರೋಪಿಗೆ ನ್ಯಾಯಾಲಯದಲ್ಲಿ ಜಾಮೀನು ದೊರೆತಿದೆ. ಬಾಲಕೃಷ್ಣ ನಾಯ್ಕ ಎಂಬ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು. ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos