ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಮಸೂದೆ 2016 ನ್ನು ಯಾವುದೇ ಬದಲಾವಣೆ ಮಾಡದೇ ಜಾರಿಗೊಳಿಸಲು ರಾಜ್ಯ ಕಾನೂನು ಇಲಾಖೆ ಒಪ್ಪಿಗೆ ನೀಡಿದೆ.
ಮುಂದಿನ ಪ್ರಕ್ರಿಯೆಯ ಭಾಗವಾಗಿ ಮಸೂದೆಯ ಸಮಗ್ರ ಅಧ್ಯಯನಕ್ಕೆ ನಗರಾಭಿವೃದ್ಧಿ ಇಲಾಖೆಗೆ ಕಳಿಸಿಕೊಡಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ರಿಯಾಲ್ಟಿ ಮಸೂದೆಯ ಬಗ್ಗೆ ಚರ್ಚೆ ನಡೆದಿದ್ದು, ಯುಡಿಡಿ ಅಭಿಪ್ರಾಯ ಪಡೆದು ತಡ ಮಾಡದೇ ಮಸೂದೆಯನ್ನು ಜಾರಿಗೊಳಿಸಬೇಕೆಂದು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿಬಿ ಜಯಚಂದ್ರ ಹೇಳಿದ್ದಾರೆ.
ಕಾನೂನು ಇಲಾಖೆ ಗ್ರೀನ್ ಸಿಗ್ನಲ್ ನೀಡಿದ ಬಳಿಕ ನನ್ನ ನೇತೃತ್ವದ ಸಂಪುಟ ಉಪಸಮಿತಿ ಸಹ ಮಸೂದೆ ಜಾರಿಗೆ ಒಪ್ಪಿಗೆ ಸೂಚಿಸಿದೆ. ಈಗ ನಗರಾಭಿವೃದ್ಧಿ ಇಲಾಖೆಯ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಸೂದೆ ಜಾರಿಗೆ ಬಂದಿದ್ದರೂ ಕರ್ನಾಟಕ ಆ ನಿಯಮಗಳ ಬಗ್ಗೆ ಅಧಿಸೂಚನೆ ಹೊರಡಿಸಬೇಕಿದೆ. ಕೆಲವೇ ವಾರಗಾಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಜಯಚಂದ್ರ ಮಾಹಿತಿ ನೀಡಿದ್ದಾರೆ.