ಬೆಂಗಳೂರು: ಪಿತ್ತನಾಳದ ಸೋಂಕು ಹಾಗೂ ಜ್ವರದಿಂದ ಬಳಲುತ್ತಿದ್ದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರು ಶನಿವಾರ ಬಿಜಿಎಸ್ ಆಸ್ಪತ್ರೆಯಿಂದ ಬಿಡುಗಡೆಗೊಂಡು ತುಮಕೂರು ಸಿದ್ದಗಂಗಾ ಮಠಕ್ಕೆ ವಾಪಸ್ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆ ಮೂಲಗಳು ತಿಳಿಸಿರುವಂತೆ "ಸ್ವಾಮೀಜಿ ಅವರಿಗೆ ಪಿತ್ತನಾಳದ ಸೋಂಕಿನಿಂದ ಜ್ವರ ಬಂದಿತ್ತು. ಕಳೆದ ವರ್ಷ ಪಿತ್ತನಾಳಕ್ಕೆ ಸ್ಟೆಂಟ್ ಅಳವಡಿಸಿದ್ದೆವು. ಆದರೆ ಆ ಸ್ಟಂಟ್ ಬ್ಲಾಕ್ ಆಗಿತ್ತು. ಶುಕ್ರವಾರ ಅದನ್ನು ತೆಗೆದು ಹೊಸ ಸ್ಟೆಂಟ್ ಅಳವಡಿಸಲಾಗಿತ್ತು. ಇದಕ್ಕೆ ಸ್ವಾಮೀಜಿ ಚೆನ್ನಾಗಿ ಸ್ಪಂದಿಸಿದ್ದು, ಅವರ ಆರೋಗ್ಯ ಈಗ ಸುಧಾರಿಸಿದೆ. ಪ್ರಸ್ತುತ ಸ್ವಾಮೀಜಿ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಅವರ ಆರೋಗ್ಯದ ನಿಗಾ ವಹಿಸಲು ಆಸ್ಪತ್ರೆಯ ಮೂರು ಮಂದಿ ವೈದ್ಯರು ಸ್ವಾಮೀಜಿ ಅವರೊಂದಿಗೆ ಸಿದ್ದಗಂಗಾ ಮಠಕ್ಕೆ ತೆರಳಲಿದ್ದಾರೆ’ ಎಂದು ವೈದ್ಯರು ಹೇಳಿದ್ದಾರೆ.
ಶನಿವಾರ ಮಧ್ಯಾಹ್ನ 12.20ರ ಸುಮಾರಿಗೆ ಶಿವಕುಮಾರ ಸ್ವಾಮೀಜಿ ಅವರನ್ನು ಆಸ್ಪತ್ರೆಯಿಂದ ಕಾರಿನಲ್ಲಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ.