ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್
ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಗಾಳಿ, ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಿಂದ ಅನೇಕ ಕಡೆಗಳಲ್ಲಿ ಮರ, ಕೊಂಬೆಗಳು ಧರೆಗುರುಳುತ್ತಿವೆ. ರಸ್ತೆಗಳಲ್ಲೆಲ್ಲಾ ನೀರು ತುಂಬಿ ಸಾಯಂಕಾಲ ಹೊತ್ತು ವಾಹನ ಸವಾರರಿಗೆ ಸಂಚರಿಸುವುದೇ ವಿಪರೀತ ಕಷ್ಟವಾಗುತ್ತಿರುವ ಸಂದರ್ಭದಲ್ಲಿ ನಾಗರಿಕರು ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯುಎಸ್ಎಸ್ ಬಿ ಗಳ ಸಹಾಯವಾಣಿಗಳಿಗೆ ದೂರನ್ನು ಹೊತ್ತು ಕರೆ ಮಾಡುತ್ತಾರೆ.
ನಿತ್ಯವೂ ಹೀಗೆ ಬರುವ ಸಾವಿರಾರು ಕರೆಗಳನ್ನು ನಿಭಾಯಿಸಲು ಸಾಧ್ಯವಾಗದೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ಇಂದಿನಿಂದ 12 ಹೊಸ ಮೊಬೈಲ್ ಸಹಾಯವಾಣಿಗಳನ್ನು ಆರಂಭಿಸುತ್ತಿದೆ. ಕಳೆದ ಎರಡು ವಾರಗಳಲ್ಲಿ ಪ್ರತಿಸಲ ಮಳೆಯಾದಾಗ ಬೆಸ್ಕಾಂಗೆ ಸುಮಾರು 20,000 ಕರೆಗಳು ಬರುತ್ತಿದ್ದವು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈಗಿರುವ ಸಂಖ್ಯೆ 1912ನಲ್ಲಿ ಅಷ್ಟೊಂದು ಕರೆಗಳನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ 12 ಹೆಚ್ಚುವರಿ ಮೊಬೈಲ್ ಸಹಾಯವಾಣಿಗಳನ್ನು ನಗರದ ನಾಲ್ಕೂ ವಲಯಗಳಿಗೆ ಆರಂಭಿಸಿದ್ದೇವೆ. ಇನ್ನೆರಡು ತಿಂಗಳಲ್ಲಿ ಮತ್ತೆ 15 ಸಂಪರ್ಕ ಸೇವೆಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಗೃಹ ಕಾರ್ಯ, ನೀರಾವರಿ ಅಥವಾ ಕೈಗಾರಿಕಾ ಉದ್ದೇಶಗಳಿಗೆ ಹೊಸ ಸಂಪರ್ಕ ಪಡೆದುಕೊಂಡವರಿಗೆ 4 ರಿಂದ 5 ಸ್ಟಾರ್ ಶಕ್ತಿ ಸಮರ್ಥ ಪಂಪ್ ಸೆಟ್ ಗಳನ್ನು ಕಡ್ಡಾಯಗೊಳಿಸಲು ಇಂಧನ ಇಲಾಖೆ ತೀರ್ಮಾನಿಸಿದೆ. ಈ ನಿಯಮ ರಾಜ್ಯದೆಲ್ಲೆಡೆ ಅನ್ವಯವಾಗುತ್ತಿದ್ದು ಈ ಬಗ್ಗೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ.
ಪ್ರಸ್ತುತ ಶೇಕಡಾ 39ರಷ್ಟು ವಿದ್ಯುತ್ ಪೂರೈಕೆ ಪಂಪ್ ಸೆಟ್ ಗಳಿಗೆ ಹೋಗುತ್ತಿದ್ದು ಅದಕ್ಕೆ 26.5 ಲಕ್ಷದಷ್ಟಾಗುತ್ತದೆ. ಇಂಧನ ದಕ್ಷತೆಯ ಸೆಟ್ ಗಳನ್ನು ಬಳಸಿಕೊಂಡರೆ, ಶೇಕಡಾ 30ರಷ್ಟು ಇಂಧನವನ್ನು ಉಳಿಸುವ ಉದ್ದೇಶ ನಮ್ಮದು. ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಸುವುದಕ್ಕೆ ತಗಲುವ ವೆಚ್ಚವನ್ನು 9,000ಕ್ಕೆ ಕಡಿತ ಮಾಡಲು ಕೂಡ ರಾಜ್ಯ ಸರ್ಕಾರ ನೋಡುತ್ತಿದೆ.
ಬಂಡೀಪುರ ಬಳಿ 20 ಸೌರಶಕ್ತಿಚಾಲಿತ ಪಂಪ್ ಸೆಟ್ ಗಳು: ಬಂಡೀಪುರದ ಅರಣ್ಯ ಪ್ರದೇಶದಲ್ಲಿ ಸುಮಾರು 20 ಸೌರಶಕ್ತಿ ಚಾಲಿತ ಪಂಪ್ ಸೆಟ್ ಗಳನ್ನು ಸ್ಥಾಪಿಸಲು ಇಲಾಖೆ ಮುಂದಾಗಿದೆ. ಅರಣ್ಯ ಪ್ರದೇಶಗಳ ಸುತ್ತಮುತ್ತ ಇರುವ ಕೆರೆ, ಸರೋವರಗಳು ಬತ್ತಿ ಹೋಗುತ್ತಿವೆ. ಪ್ರಾಣಿಗಳಿಗೆ ಕುಡಿಯಲು ನೀರು ಇರುವುದಿಲ್ಲ. ಇಂತಹ ಸ್ಥಳಗಳಲ್ಲಿ ಸೌರಶಕ್ತಿ ಚಾಲಿತ ಪಂಪ್ ಸೆಟ್ ಗಳನ್ನು ಸ್ಥಾಪಿಸಲು ಸ್ಥಳಗಳನ್ನು ಗುರುತಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದೇವೆ ಎಂದು ಸಚಿವರು ಹೇಳಿದರು.
ಬೆಸ್ಕಾಂ ಮೊಬೈಲ್ ಸಹಾಯವಾಣಿ ಸಂಖ್ಯೆಗಳು:
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos