ಬೆಂಗಳೂರು: ಕಳೆದ 9 ತಿಂಗಳಿನಿಂದ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಮೂವರು ಪಾಕಿಸ್ತಾನಿ ಪ್ರಜೆಗಳು ಮತ್ತು ಅವರಿಗೆ ನೆರವು ನೀಡುತ್ತಿದ್ದ ಕೇರಳ ಮೂಲದ ವ್ಯಕ್ತಿಯ ಮಾವ ಕಾಸಿಮ್ ಪಾಶಾನನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಮೊಹಮ್ಮದ್ ಶಿಹಾಬ್ ಗೆ ಆತನ ಮಾವ ಪಾಶಾ ಕರಾಚಿಯಿಂದ ಸಮೀರಾಳನ್ನು ಕರೆತರುವಂತೆ ಸೂಚಿಸಿದ್ದನು. ಪಾಶಾ ಸಮೀರಾನ ಖಾತೆಗೆ ಕೇರಳದಿಂದ ಹಣ ಸಂದಾಯ ಮಾಡಿದ್ದನು. ಸಮೀರಾಳ ಬಂಧುಗಳಾದ ಕಿರೊಣ್ ಗುಲಾಮ್ ಆಲಿ ಮತ್ತು ಖ್ವಾಸಿಬ್ ಶಮ್ಶ್ ದ್ದೀನ್ ಅವರನ್ನು ಕೂಡ ಬಂಧಿಸಲಾಗಿದೆ.
ಪಾಕಿಸ್ತಾನಿ ಪ್ರಜೆಗಳು ಇಲ್ಲಿ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಬಗ್ಗೆ ಮಾಹಿತಿಗಳಾಗಲಿ, ಸುಳಿವಾಗಲಿ ಸಿಕ್ಕಿಲ್ಲ. ಇವರು ಬೆಂಗಳೂರಿಗೆ ಬರುವ ಮುನ್ನ ಬೇರೆ ಕಡೆಗಳಲ್ಲಿ ನೆಲೆಸಿದ್ದರೇ ಎಂಬುದನ್ನು ತಿಳಿಯಲು ನಾವು ಗುಪ್ತಚರ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದೆವು. ಕತಾರ್ ನಿಂದ ಭಾರತಕ್ಕೆ ಕಾಠ್ಮಂಡು ಮೂಲಕ ಇವರು ಪ್ರಯಾಣಿಸಿದ್ದರು ಮತ್ತು ಒಂದೇ ಸ್ಥಳದಲ್ಲಿ ಹಲವು ಸಮಯ ಎಲ್ಲಿಯೂ ನೆಲೆಸಿರಲಿಲ್ಲ ಎಂಬುದು ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಪ್ತಚರ ಇಲಾಖೆಯ ತಂಡ ತನಿಖೆಯಲ್ಲಿ ಕೈ ಜೋಡಿಸಿದೆ. ಇವರು ಭಾರತಕ್ಕೆ ಬರಲು ಇನ್ನೂ ಕೆಲವರು ಸಹಾಯ ಮಾಡಿರುವ ಸಾಧ್ಯತೆಯಿದೆ. ಅಗತ್ಯಬಿದ್ದರೆ ಕತಾರ್ ಗೆ ತನಿಖಾ ತಂಡವನ್ನು ಕಳುಹಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.