ಮೈಸೂರು: ಸತತವಾಗಿ ಸುರಿಯಿತ್ತಿರುವ ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಚರಂಡಿ ನೀರಿನಲ್ಲಿ ಎರಡೂವರೆ ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮುನೇಶ್ವರ ನಗರದ ಕಾರ್ ಮ್ಯಾಕನಿಕ್ ಮೊಹಮದ್ ಹುಸೇನ್ ಹಾಗೂ ಹಜೀರಾ ಬೇಗಂ ದಂಪತಿಯ ಎರಡೂವರೆ ವರ್ಷದ ಅಲಿಯಾ ಮೃತ ಬಾಲಕಿ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉದಯಗಿರಿ ಸಮೀಪದ ಮುನೇಶ್ವರ ನಗರದಲ್ಲಿ ತೆರೆದಿದ್ದ ಚರಂಡಿಯಲ್ಲಿ ನೀರು ತುಂಬಿ ಹರಿದಿದೆ.ಚರಂಡಿ ನೀರು ಹುಸೇನ್ ಮನೆಯೊಳಗೆ ನುಗ್ಗಿತ್ತು. ರಾತ್ರಿ 11ರ ವೇಳೆಯಲ್ಲಿ ದಂಪತಿ ಮನಯೊಳಗೆ ತುಂಬಿದ್ದ ನೀರನ್ನು ಹೊರ ಹಾಕುತ್ತಿರುವಾಗ ಬಾಲಕಿ ಅಲಿಯಾ ಮನೆಯಿಂದ ಹೊರಗೆ ಹೋಗಿ ಚರಂಡಿಯೊಳಗೆ ಬಿದ್ದಿದ್ದಾಳೆ. ನಂತರ ಪೋಷಕರು ಮಗಳನ್ನು ಸುತ್ತಮುತ್ತಲು ಹುಡುಕಿದ್ದಾರೆ, ಆದರೆ ಎಲ್ಲಿಯೂ ಕಾಣಲಿಲ್ಲ, ಒಂದು ಗಂಟೆಯನಂತರ ಚರಂಡಿಯಲ್ಲಿ ಸಿಲುಕಿಕೊಂಡಿದ್ದಾಳೆ.
ಕೂಡಲೇ ಬಾಲಕಿಯನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಾಗಲೇ ಬಾಲಕಿ ಸಾವನ್ನಪ್ಪಿದ್ದಳು. ಆದರೆ ಪೋಷಕರು ಇದುವರೆಗೂ ಯಾವುದೇ ದೂರು ದಾಖಲಿಸಿಲ್ಲ, ಜೊತೆಗೆ ಜಿಲ್ಲಾಡಳಿತ ನೀಡಿದ 4 ಲಕ್ಷ ರು ಪರಿಹಾರ ಹಣವನ್ನು ಪಡೆಯಲು ನಿರಾಕರಿಸಿದ್ದಾರೆ. ಜೊತೆಗೆ ಮರಣೋತ್ತರ ಪರೀಕ್ಷೆ ನಡೆಸದಂತೆ ಕೂಡ ತಡೆದಿದ್ದಾರೆ.