ಮೈಸೂರು: ಬೆಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ಆರು ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ವಿಚಾರದಲ್ಲಿ ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ಹಗ್ಗ-ಜಗ್ಗಾಟ ನಡೆಯುತ್ತಿದ್ದು, ಈ ಸಂಬಂಧ ರಾಜ್ಯಪಾಲ ವಜುಭಾಯಿ ವಾಲಾ ಅವರು ಬುಧವಾರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಇಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ರಾಜ್ಯಪಾಲರು, ರಾಜ್ಯ ಸರ್ಕಾರ ಖಾಲಿ ಇರುವ ವಿವಿಗಳಿಗೆ ಕುಲಪತಿಗಳ ಹೆಸರನ್ನು ರಾಜಭವನಕ್ಕೆ ಶಿಫಾರಸು ಮಾಡಬೇಕು. ನಾನು ಯಾವುದೇ ಕಡತಗಳನ್ನು ಬಾಕಿ ಉಳಿಸಿಕೊಳ್ಳುವುದಿಲ್ಲ. ಮೂರೇ ದಿನಗಳಲ್ಲಿ ಕ್ಲಿಯರ್ ಮಾಡುವುದಾಗಿ ಹೇಳಿದ್ದಾರೆ.
ಕುಲಪತಿಗಳ ನೇಮಕ ಶಿಫಾರಸು ವಾಪಸ್ ಕಳುಹಿಸಿರುವುದಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅವರಿಗೆ ರಾಜಭವನದ ಬಗ್ಗೆ ಅಸಮಾಧಾನವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜ್ಯಪಾಲರು, ಕಡತಗಳು ಕ್ರಮವಾಗಿ ಇರಲಿಲ್ಲ. ಹೀಗಾಗಿ ಸರ್ಕಾರಕ್ಕೆ ವಾಪಸ್ ಕಳುಹಿಸಲಾಗಿದೆ ಎಂದಿದ್ದಾರೆ.
ಕುಲಪತಿಗಳ ನೇಮಕ ವಿಳಂಬವಾಗುವುದರಿಂದ ವಿವಿಗಳಲ್ಲಿ ಉಪನ್ಯಾಸಕರ ನೇಮಕಾತಿಯೂ ವಿಳಂಬವಾಗುತ್ತಿದ್ದು, ಇದರಿಂದ ಉಪನ್ಯಾಸಕರ ಸಂಖ್ಯೆ ಶೇ.50ಕ್ಕೆ ಇಳಿದಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ವಜುಭಾಯಿ ವಾಲಾ ಅವರು, ಹಂಗಾಮಿ ಕುಲಪತಿಗಳು ಉಪನ್ಯಾಸಕರ ನೇಮಕಾತಿ ನಡೆಸಬಹುದು ಮತ್ತು ಬಡ್ತಿ ನೀಡಬಹದು. ಕುಲಪತಿಗಳ ಹುದ್ದೆ ಖಾಲಿ ಬಿಡುವುದು ಆಡಳಿತಾತ್ಮಕ ವಿಚಾರ ಎಂದು ಹೇಳಿದ್ದಾರೆ.
ಬೆಂಗಳೂರು, ಮೈಸೂರು, ತುಮಕೂರು ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಜಾನಪದ ವಿಶ್ವವಿದ್ಯಾಲಯ ಕುಲಪತಿಗಳ ನೇಮಕ ಬಾಕಿಯಿದೆ. ಈ ಸಂಬಂಧ ಕಳೆದ 6 ತಿಂಗಳಿನಿಂದಲೂ ಪ್ರಕ್ರಿಯೆ ನಡೆಯುತ್ತಿದೆ. ಕುಲಪತಿ ಶೋಧನಾ ಸಮಿತಿ ರಚಿಸಿ ಆಯ್ಕೆಯಾದ ಹೆಸರುಗಳನ್ನು ರಾಜಭವನಕ್ಕೆ ಕಳುಹಿಸಲಾಗಿದೆ. ಆದರೆ, ಪ್ರತಿಷ್ಠಿತ ಎನಿಸಿಕೊಂಡಿರುವ ಬೆಂಗಳೂರು ಹಾಗೂ ಮೈಸೂರು ವಿವಿಗಳಿಗೆ ತಮಗೆ ಆಪ್ತರಾದವರನ್ನು ನೇಮಿಸುವಂತೆ ಸರ್ಕಾರದ ಕಡೆಯಿಂದ ರಾಜಭವನದ ಮೇಲೆ ಒತ್ತಡ ಹೇರಲಾಗುತ್ತಿದೆ. ಹಾಗಾಗಿ ರಾಜ್ಯಪಾಲರು ಅಂಗೀಕಾರ ನೀಡಿಲ್ಲ. ಬದಲಾಗಿ ಹೊಸ ಪ್ರಸ್ತಾವ ಕಳುಹಿಸಿಕೊಡುವಂತೆ ನಿರ್ದೇಶನ ನೀಡಿದ್ದಾರೆಂದು ಹೇಳಲಾಗುತ್ತಿದೆ.