ರಾಜ್ಯ

ಬೆಂಗಳೂರು: ರಾಯಲ್ ಕನ್ಕಾರ್ಡ್ ಶಾಲೆ ಕಟ್ಟಡದ ಕಿಟಕಿ ಗಾಜು ಬಿದ್ದು ಇಬ್ಬರು ಮಕ್ಕಳಿಗೆ ಗಾಯ

Sumana Upadhyaya
ಬೆಂಗಳೂರು: ಆಕಸ್ಮಿಕ ಅಪಘಾತ ಪ್ರಕರಣವೊಂದರಲ್ಲಿ ಕಲ್ಯಾಣನಗರದ ರಾಯಲ್ ಕನ್ಕಾರ್ಡ್ ಇಂಟರ್ ನ್ಯಾಷನಲ್ ಶಾಲೆಯ ನಾಲ್ಕನೇ ಮಹಡಿಯ ಕೋಣೆಯ ಗಾಜಿನ ಕಿಟಕಿ ಮುರಿದು ಬಿದ್ದು ಇಬ್ಬರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ನಿನ್ನೆ ನಡೆದಿದ್ದು, ಪೋಷಕರು ಇದೀಗ ಶಾಲೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆಯಿಂದಲೇ ಶಾಲೆ ಬಳಿ ಜಮಾಯಿಸಿದ ಪೋಷಕರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ್ದೀರಾ, ಮಕ್ಕಳ ಬಗ್ಗೆ ಕಾಳಜಿ ಇದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಮಾಜಿ ಶಾಸಕ ಎಲ್. ಆರ್. ಶಿವರಾಮೇ ಗೌಡ ಅವರ ಒಡೆತನದ ಶಾಲೆ ಇದಾಗಿದ್ದು, ಇದೀಗ ಅವರು ಶಾಲೆಗೆ ಆಗಮಿಸಿ ಪೋಷಕರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.
ನಿನ್ನೆ ಶಾಲಾ ಅವಧಿಯಲ್ಲಿ ತಳ ಮಹಡಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಕ್ಕಳ ಮೇಲೆ ಗಾಜಿನ ತುಂಡು ಬಿದ್ದು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡ ಮಕ್ಕಳ ಆಸ್ಪತ್ರೆಯ ಚಿಕಿತ್ಸೆ ವೆಚ್ಚವನ್ನು ಶಾಲೆಯೇ ಭರಿಸುವುದಾಗಿ ಭರವಸೆ ನೀಡಿದೆ. 
ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಕಾಪಾಡಲು ಆಡಳಿತ ಮಂಡಳಿ ವಿಫಲವಾಗಿದೆ ಎಂದು ಪೊಲೀಸರಿಗೆ ದೂರು ನೀಡಲು ಪೋಷಕರು ನಿರ್ಧರಿಸಿದ್ದರು. ಆದರೆ ನಂತರ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು ಪೋಷಕರ ಮನವೊಲಿಸಿ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊರುತ್ತೇವೆಂದು ಕೇಳಿಕೊಂಡಾಗ ಪೋಷಕರು ಪೊಲೀಸರಿಗೆ ದೂರು ನೀಡುವ ನಿರ್ಧಾರದಿಂದ ಹಿಂದೆ ಸರಿದರು.
SCROLL FOR NEXT