ಬೆಂಗಳೂರು: ಸ್ಥಿರಾಸ್ತಿ ವ್ಯಾಜ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ದಿನ ಎರಡು ವಿಭಿನ್ನ ಆದೇಶ ಹೊರಡಿಸಿದ್ದ ಕೊಡಗು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರ ವಿರುದ್ಧ ಎಫ್ಐಆರ್ ಹಾಗೂ ಶಿಸ್ತುಕ್ರಮ ಜರುಗಿಸುವಂತೆ ತಾನೇ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಪ್ರಕರಣ ಸಂಬಂಧ ನ್ಯಾಯಾಂಗ ವಿಚಕ್ಷಣಾ ವಿಭಾಗದ ರಿಜಿಸ್ಟ್ರಾರ್ ಅಥವಾ ಸ್ಥಳೀಯ ನ್ಯಾಯಾಂಗ ಅಧಿಕಾರಿಯು ಕೊಡಗು ಜಿಲ್ಲಾಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಲು ಮತ್ತು ಸರ್ಕಾರದ ಕಾರ್ಯದರ್ಶಿ ಶಿಸ್ತುಕ್ರಮ ಜರುಗಿಸಲು ಸೂಚಿಸಿ ಗುರುವಾರಷ್ಟೇ ನ್ಯಾಯಾಲಯದ ಆದೇಶ ನೀಡಿತ್ತು.
ಎಫ್ಐಆರ್ ದಾಖಲಿಸಲು ಸೂಚಿಸಿ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಕೋರಿ ಹೈಕೋರ್ಟ್'ಗೆ ಜಿಲ್ಲಾಧಿಕಾರಿ ಶುಕ್ರುವಾರ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ವಿಚಾರಣೆಗೆ ಖುದ್ದು ಹಾಜರಾಗಿದ್ದ ಅವರು, ಪ್ರಕರಣದಲ್ಲಿ 2017ರ ಮೇ.25ರಂದು ಮೊದಲ ಆದೇಶ ಹೊರಡಿಸಿದ್ದೆ. ಅದರಲ್ಲಿ ಕೆಲ ದೋಷಗಳಿದ್ದರಿಂದ ಆ.29 ರಂದು ಎರಡನೇ ಆದೇಶ ಮಾಡಿದ್ದೆ. ಮೊದಲ ಆದೇಸಕ್ಕೆ ತಿದ್ದುಪಡಿ ಮಾಡಿದ್ದರಿಂದ ಅದೇ ದಿನಾಂಕವನ್ನು ಉಳಿಸಿಕೊಳ್ಳಬೇಕಾಗುತ್ತದೆ ಎಂದು ಭಾವಿಸಿ, ಎಱಡನೇ ಆದೇಶ ಹೊರಡಿಸಿದ್ದ ದಿನಾಂಕ ನಮೂದಿಸಲಿಲ್ಲ ಎಂದು ಸಮಜಾಯಿಷಿ ನೀಡಿದರು.
ಮತ್ತೊಂದೆಡೆ ಹೆಚ್ಚುವರಿ ಅಡ್ವೋಕೇಟ್ ಜನರ್ ಎ.ಎಸ್. ಪೊನ್ನಣ್ಣ ವಾದಿಸಿ,ಸ ಜಿಲ್ಲಾಧಿಕಾರಿಗಳು ಕೆಲ ತಪ್ಪು ಮಾಡಿರುವುದು ನಿಜ. ಅದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ ಎಂದು ತಿಳಿಸಿದರು.
ಮೊದಲಿಗೆ ಈ ಮನವಿ ಪುರಸ್ಕರಿಸಲು ನಿರಾಕರಿಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ, ಪೊನ್ನಣ್ಣ ಅವರು ಪದೇ ಪದೇ ಮನವಿ ಮಾಡಿದ್ದರಿಂದ ತಡೆಯಾಜ್ಞೆ ನೀಡಿದರು.