ರಾಜ್ಯ

ವಿಜಯಪುರ: ಭಾರಿ ಮಳೆಗೆ ಮನೆ ಗೋಡೆ ಕುಸಿದು ತಾಯಿ ಮಗಳ ಸಾವು

Srinivasamurthy VN
ವಿಜಯಪುರ: ಕಳೆದ ಕೆಲವು ದಿನಗಳಿಂದ  ಸುರಿಯುತ್ತಿರುವ ಭಾರಿ ಉತ್ತರ ಕರ್ನಾಟಕದಲ್ಲಿ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ಮಳೆಯಿಂದಾಗಿ ಗೋಡೆ ಕುಸಿದ ಪರಿಣಾಮ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿರುವ ಘಟನೆ  ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮಳೆಯಿಂದಾಗಿ ತೇವಗೊಂಡಿದ್ದ ಮನೆಯ ಗೋಡೆ ನಿನ್ನೆ ರಾತ್ರಿ ಕುಸಿದಿದೆ. ಪರಿಣಾಮ ಮನೆಯೊಳಗಿದ್ದ ತಾಯಿ  ಮತ್ತು ಮಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಸ್ಥಳೀಯರು ತಿಳಿಸಿರುವಂತೆ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಮಣ್ಣಿನ ಗೋಡೆ ಶಿಥಿಲಗೊಂಡಿತ್ತು. ಇಂದು ಬೆಳಗಿನ ಜಾವ ಏಕಾಏಕಿ ಕುಸಿದುಬಿದ್ದಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ತಾಯಿ  ಶಂಕ್ರಮ್ಮ ರಾಮಚಂದ್ರಪ್ಪ ಔರಾದಿ, ಮಗಳು ಮಹಾದೇವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಬಸವನಬಾಗೇವಾಡಿ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹಗಳನ್ನು ಮರಣೋತ್ತರ  ಪರೀಕ್ಷೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗಿದೆ.

ರಾಜ್ಯಾದ್ಯಂತ ಮುಂದವರೆದ ಮಳೆ

ಇದೇ ವೇಳೆ ಮಳೆ ಮುಂದುವರೆದಿದ್ದು, ಪಶ್ಚಿಮ ಬಂಗಾಳದಲ್ಲಿ ವಾಯುಭಾರ ಕುಸಿತದಿಂದಾಗಿ ಬಿಹಾರ, ಒಡಿಶಾ, ತೆಲಂಗಾಣ ಮತ್ತು ಉತ್ತರ ಕರ್ನಾಟಕದ ಭಾಗಗಳಲ್ಲಿ ಮಳೆ ಮುಂದವರೆದಿದೆ. ದಕ್ಷಿಣ ಕರ್ನಾಟಕದಲ್ಲೂ ಮಳೆ  ಮುಂದುವರೆದಿದ್ದು, ಮಳೆಯಿಂದಾಗಿ ನೆಲಮಂಗಲ ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ 2 ಮನೆಗಳು ಕುಸಿದಿವೆ. ಸ್ಥಳೀಯ ನಿವಾಸಿಗಳಾದ ಪುಟ್ಟಯ್ಯ ಮತ್ತು ವೆಂಕಟೇಶ್ ಮೂರ್ತಿ ಎಂಬುವವರಿಗೆ ಸೇರಿದ ಮನೆ ಕುಸಿದಿದ್ದು,  ಘಟನೆಯಲ್ಲಿ ಸಾವುನೋವುಗಳಾದ ಕುರಿತು ವರದಿಯಾಗಿಲ್ಲ.
SCROLL FOR NEXT