ಬೆಂಗಳೂರು: ಬೆಂಗಳೂರು ಮಹಾಮಳೆಗೆ ಮತ್ತೊಂದು ಜೀವ ಬಲಿಯಾಗಿದ್ದು, ಸಿವಿ ರಾಮನ್ ನಗರದ ಬಾಗ್ಮನೆ ಟೆಕ್ ಪಾರ್ಕ್ ಹಿಂಭಾಗದಲ್ಲಿರುವ ಚರಂಡಿಯಲ್ಲಿ 16 ವರ್ಷದ ಬಾಲಕಿ ನರಸಮ್ಮ ಕೊಚ್ಚಿಹೋಗಿದ್ದಾಳೆ.
ಭಾನುವಾರ ಬೆಳಿಗ್ಗೆ ಯುವತಿ ಚರಂಡಿಯ ಬಳಿ ಬಹಿರ್ದೆಸೆಗೆ ತೆರಳಿದ್ದಾಗ ಈ ಘಟನೆ ನಡೆದಿದ್ದು, ಸ್ಥಳೀಯರು ಬಾಲಕಿಯನ್ನು ರಕ್ಷಿಸಲು ಯತ್ನಿಸಿದರಾದರೂ ಸಹ ರಕ್ಷಣೆ ಯಶಸ್ವಿಯಾಗಲಿಲ್ಲ, ಗಂಟೆಗಳ ನಂತರ ಆಕೆಯ ಮೃತದೇಹ ಘಟನಾ ಸ್ಥಳದಿಂದ 400 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಸ್ಥಳೀಯರಿಗೆ ಮೃತದೇಹ ಪತ್ತೆಯಾಗಿರುವುದರಿಂದ ತುರ್ತು ಪರಿಸ್ಥಿತಿ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೆ ಮಾಹಿತಿ ನೀಡಿರಲಿಲ್ಲ ಎಂದು ಬೈಯ್ಯಪ್ಪನಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಚರಂಡಿ ಬಳಿ ಬೇಲಿ ಹಾಕದಿದ್ದಕ್ಕೆ ಮೃತ ಯುವತಿಯ ಕುಟುಂಬ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.