ಬೆಂಗಳೂರಿನಲ್ಲಿ ಭಾರಿ ಮಳೆ: ನಾಲ್ವರ ಸಾವು
ಬೆಂಗಳೂರು: ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದ್ದು ಕಾರಿನ ಮೇಲೆ ಮರ ಬಿದ್ದ ಪರಿಣಾಮ ದಂಪತಿ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಕಾಲುವೆಯಲ್ಲಿ ಕೊಚ್ಚಿ ಹೋಗಿ ಒಬ್ಬ ಯುವಕ ಮೃತಪಟ್ಟಿದ್ದಾರೆ.
ಬೆಂಗಳೂರು ಮಿನರ್ವ ವೃತ್ತ ಸಮೀಪದ ಡಿಸ್ಪೆನ್ಸರಿ ರಸ್ತೆಯಲ್ಲಿ ಕಾರಿನ ಮೇಲೆ ನೀಲಗಿರಿ ಮರ ಬಿದ್ದಿದ್ದರಿಂದ, ಒಳಗಿದ್ದ ಮೂವರು ಮೃಅತಪಟ್ಟಿದ್ದಾರೆ.
ಮೃತರನ್ನು ಸುಂಕದಕಟ್ಟೆಯ ರಮೇಶ್ (42), ಅವರ ಪತ್ನಿ ಭಾರತಿ (38) ಹಾಗೂ ಸಂಬಂಧಿ ಜಗದೀಶ್ (42) ಎಂದು ಗುರುತಿಸಲಾಗಿದೆ. ರಮೇಶ್ ಅವರ ಮಗ ಲೋಹಿತ್ (10) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರವನ್ನು ತೆರವುಗೊಳಿಸಿರುವ ಬಿಬಿಎಂಪಿ ಸಿಬ್ಬಂದಿ ಹಾಗೂ ಪೊಲೀಸರು, ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೃತಪಟ್ಟ ರಮೇಶ್ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಯೊಂದರಲ್ಲಿ ವ್ಯವಸ್ಥಾಪಕರಾಗಿದ್ದರು. ಅದೇ ಕಾರ್ಖಾನೆಯಲ್ಲಿ ಜಗದೀಶ್ ಟೈಲರ್ ಆಗಿದ್ದರು. ಭಾರತಿ ಗೃಹರಕ್ಷಕದಳದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಕಲಾಸಿಪಾಳ್ಯ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರು ದುರಸ್ತಿಗಾಗಿ ಕಲಾಸಿಪಾಳ್ಯದ ಗ್ಯಾರೇಜ್ಗೆ ಬಂದಿದ್ದ ರಮೇಶ್ ರಾತ್ರಿ 7ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದ್ದರು. ಅದೇ ವೇಳೆ ಮಳೆ ಜೋರಾಗಿ ಬರುತ್ತಿದ್ದರಿಂದ ಮರದ ಕೆಳಗೆ ಕಾರು ನಿಲ್ಲಿಸಿದ್ದರು.
ಕೆಲ ನಿಮಿಷದಲ್ಲಿ ಮರವು ಕಾರಿನ ಮೇಲೆ ಉರುಳಿದೆ. ಕಾರು ಜಖಂ ಗೊಂಡು , ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೂಡಲೇ ಸಹಾಯಕ್ಕೆ ಬಂದ ಸ್ಥಳೀಯರು, ಆಸನದ ಕೆಳಗೆ ಸಿಲುಕಿದ್ದ ಲೋಹಿತ್ನನ್ನು ರಕ್ಷಿಸಿ ಹೊರಗೆ ಕರೆತಂದರು
ಇನ್ನು ಮಳೆಯ ಕಾರಣದಿಂದ ಗಾಳಿ ಜೋರಾಗಿ ಬೀಸಿದ್ದರಿಂದ ಜೆ.ಪಿ.ನಗರದ ಎರಡು ಕಡೆಗಳಲ್ಲಿ ಮರಗಳು ಉರುಳಿಬಿದ್ದಿವೆ. ಶಿವಾನಂದ ವೃತ್ತದ ಕೆಳಸೇತುವೆಯಲ್ಲಿ ನೀರು ನಿಂತುಕೊಂಡು ರಾತ್ರಿ ಬಹುಹೊತ್ತಿನವರೆಗೆ ವಾಹನಗಳ ಸಂಚಾರ ಬಂದ್ ಆಯಿತು.
ಮೆಜೆಸ್ಟಿಕ್, ನೃಪತುಂಗ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆಯಲ್ಲಿ ವಾಹನಗಳ ದಟ್ಟಣೆ ಕಂಡುಬಂತು. ನಗರದಲ್ಲಿ ಸರಾಸರಿ 3 ಮಿ.ಮೀ ಮಳೆಯಾಗಿದೆ. ಸಂಪಂಗಿರಾಮನಗರ 17.5 ಮಿ.ಮೀ, ಆನೇಕಲ್ 11 ಮಿ.ಮೀ, ರಾಜಾಜಿನಗರ 19 ಮಿ.ಮೀ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿ ತಿಳಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos