ರಾಜ್ಯ

ನಕ್ಸಲರು ಗೌರಿ ಲಂಕೇಶ್'ರನ್ನು ಹತ್ಯೆ ಮಾಡಿಲ್ಲ, ಹತ್ಯೆ ಹಿಂದೆ ಸಂಘ ಪರಿವಾರದ ಕೈವಾಡ: ನಕ್ಸಲ್ ಮಾಜಿ ನಾಯಕ

Manjula VN
ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆಯನ್ನು ನಕ್ಸಲರು ಮಾಡಿಲ್ಲ, ಹತ್ಯೆ ಹಿಂದೆ ಸಂಘ ಪರಿವಾರದ ಕೈವಾಡವಿದ್ದು, ಈ ಕುರಿತು ಸರ್ಕಾರ ತನಿಖೆ ನಡೆಸಬೇಕೆಂದು ನಕ್ಸಲ್ ಮಾಜಿ ನಾಯಕರು ಹೇಳಿಕೊಂಡಿದ್ದಾರೆ. 
ನಿನ್ನೆಯಷ್ಟೇ ಮಾಜಿ ನಕ್ಸಲರಾದ ನೂರ್ ಶ್ರೀಧರ್, ಸಿರಿಮನೆ ನಾಗರಾಜು ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದು, ಗೌರಿ ಹತ್ಯೆ ಪ್ರಕರಣ ಸಂಬಂಧ ಸಂಘ ಪರಿವಾರಗಳ ಮೇಲೆ ಆರೋಪ ಮಾಡಿದ್ದಾರೆ. 
ಸಂಘ ಪರಿವಾರದವರು ಗೌರಿ ಲಂಕೇಶ್'ರ ಮೂಲ ಶತ್ರುಗಳಾಗಿದ್ದರು. ಗೌರಿ ವಿರುದ್ಧೇ ದ್ವೇಷ ಕಾರುತ್ತಿದ್ದರು. ಈಗ ಸಾವನ್ನೂ ಸಂಭ್ರಮಿಸುತ್ತಿದ್ದಾರೆ. ಈ ಅಂಶಗಳನ್ನು ಪರಿಗಣಿಸಿದರೆ ಸಂಘ ಪರಿವಾರವೇ ಕೃತ್ಯಕ್ಕೆ ಮೂಲಕ ಕಾರಣ ಎಂಬು ಭಾವಿಸಬಹುದು ಎಂದು ಹೇಳಿದ್ದಾರೆ.
ಉದ್ದೇಶಪೂರ್ವಕವಾಗಿ ನಕ್ಸಲರ ಮೇಲೆ ಹತ್ಯೆಯ ಹೊಣೆ ಹೊರಿಸುವ ಕುತಂತ್ರವನ್ನು ಮಾಡಲಾಗುತ್ತಿದೆ. ನಕ್ಸಲರು ಇಂತಹ ಘಟನೆಗಳಲ್ಲಿ ಪಾಲ್ಗೊಂಡರೆ ಅದನ್ನು ಕರಪತ್ರ ಅಥವಾ ಇನ್ನಾವುದೇ ರೀತಿಯಲ್ಲಿ ಘೋಷಿಸಿಕೊಳ್ಳುತ್ತಾರೆ. ಈ ಘಟನೆಯಲ್ಲಿ ಅಂತಹದ್ದಾವುದೂ ನಡೆದಿಲ್ಲ. ಮಾವೋವಾದ ಶಿಸ್ತುಬದ್ಧ ರಾಜಕೀಯ ಪಕ್ಷವಾಗಿದೆ. ಅದಕ್ಕೊಂದು ಪ್ರಣಾಳಿಕೆ ಮತ್ತು ಸಂವಿಧಾನವಿದೆ. ಕಟ್ಟುನಿಟ್ಟಾದ ಸಂಘಟನಾ ನೀತಿಯನ್ನು ಹೊಂದಿದ್ದು, ಅದರ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ. 
ಪಕ್ಷದಲ್ಲಿನ ಬಹುಸಂಖ್ಯಾತರ ಅಭಿಪ್ರಾಯದಂತೆ ಇತರರು ಮುನ್ನಡೆಯುವ ವ್ಯವಸ್ಥೆಯನ್ನು ಹೊಂದಿದೆ. ಮಾವೋವಾದ ಪಕ್ಷದ ಸಿದ್ಧಾಂತಗಳನ್ನು ನಂಬಿರುವವರು ಈ ಹತ್ಯೆ ಮಾಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ. 
ಆದಿವಾಸಿಗಳ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುತ್ತಿರುವ ವಿಕ್ರಂಗೌಡ ಅವರ ವಿರುದ್ಧ ವಿನಾಕಾರಣ ಗೌರಿ ಹತ್ಯೆ ಪ್ರಕರಣ ಸಂಬಂಧ ಆರೋಪಗಳನ್ನು ಮಾಡಲಾಗುತ್ತಿದೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಮ್ಮ ಮೇಲೂ ಸಾವಿನ ತೂಗುಕತ್ತಿ ಇದೆ. ಆದರೆ, ನಾವು ಯಾವುದೇ ಬೆದರಿಕೆಗೂ ಮಣಿಯುವುದಿಲ್ಲ. ಗೌರಿ ಹತ್ಯೆಯಲ್ಲಿ ನಕ್ಸಲರ ಕೈವಾಡ ಇಲ್ಲ ಎನ್ನುವುದು ಸಾಬೀತಾದರೆ ಸುಳ್ಳು ಆರೋಪ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ನಕ್ಸಲರೊಂದಿಗೆ ಗೌರಿ ಉತ್ತಮ ಸಂಬಂಧ ಹೊಂದಿದ್ದರು. ಇಂತಹ ಹೀನ ಕೃತ್ಯಕ್ಕೆ ನಕ್ಸಲರು ಕೈ ಹಾಕುವುದಿಲ್ಲ ಎಂದು ಸಿರಿಮನೆ ನಾಗರಾಜ್ ಅವರು ಸ್ಪಷ್ಟಪಡಿಸಿದ್ದಾರೆ. 
SCROLL FOR NEXT